ನಾಪತ್ತೆಯಾದ ಯೋಧನ ಸುಳಿವು ಇನ್ನೂ ಸಿಕ್ಕಿಲ್ಲ!
Team Udayavani, Feb 24, 2019, 1:08 AM IST
ಕೊಪ್ಪಳ: ದೇಶದ ಗಡಿ ಕಾಯಲು ತೆರಳಿದ್ದ ಕೊಪ್ಪಳದ ಯೋಧ 15 ವರ್ಷದಿಂದ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಮಗನ ಬರುವಿಕೆಗಾಗಿ ತಾಯಿ ಹಗಲಿರುಳು ನಿದ್ದೆ ಮಾಡದೇ ಕಾದು ಕಣ್ಣೀರಿಡುತ್ತಿದ್ದಾಳೆ.
ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ಯೋಧ ಬಸವಣ್ಣಯ್ಯ ಹಿರೇಮಠ 2001ರಲ್ಲಿಯೇ ಸಿಆರ್ಪಿಎಫ್ 29ನೇ ಬೆಟಾಲಿಯನ್ನಲ್ಲಿ ಯೋಧರಾಗಿ ದೇಶ ಸೇವೆಗೆ ತೆರಳಿದ್ದರು. ಮೊದಲು ನಾಲ್ಕು ವರ್ಷ ಚೆನ್ನಾಗಿಯೇ ಇದ್ದ ಬಸವಣ್ಣಯ್ಯ ಮನೆಗೆ ಬಂದು ಎಲ್ಲರೊಂದಿಗೆ ಇದ್ದು ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದರು. ಆದರೆ 2004ರಲ್ಲಿ ಸೇನಾ ಅಧಿ ಕಾರಿಗಳಿಂದ ಮನೆಗೆ ಕರೆ ಬಂದಿದ್ದು, “ನಿಮ್ಮ ಪುತ್ರ ಬಸವಣ್ಣಯ್ಯ ಅವರಿಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ ಆತ ಅಲ್ಲಿಂದ ಕಾಣೆಯಾಗಿದ್ದಾನೆ. ನಿಮ್ಮ ಊರಿಗೆ ಬಂದರೆ ತಿಳಿಸಿ’ ಎಂದು ಹೇಳಿದ್ದರು.ಇದರಿಂದ ಆತಂಕಗೊಂಡ ಪಾಲಕರು ಮಗನ ಆಗಮನಕ್ಕಾಗಿ ಹಗಲಿರುಳು ಕಾದರು. ಆದರೆ ಮಗ ಮಾತ್ರ ಮತ್ತೆ ಮನೆಗೆ ಬಂದಿಲ್ಲ. ಅತ್ತ ಸಿಆರ್ಪಿಎಫ್ ತುಕುಡಿಯಲ್ಲೂ ಇಲ್ಲ. ಇರುವ ಒಬ್ಬನೇ ಮಗ ಮನೆಗೆ ಬಾರದ್ದಕ್ಕೆ ಇಡೀ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ತಾಯಿ ಸಂಗಮ್ಮ ಈಗಲೂ ಆಶ್ರಯ ಮನೆಯಲ್ಲಿಯೇ ವಾಸ ಮಾಡುತ್ತಿದ್ದಾಳೆ. ಸೇನೆಯಿಂದಲೂ ಆಕೆಗೆ ನೆರವು ದೊರೆಯುತ್ತಿಲ್ಲ. ಮಗ ಮನೆಗೆ ಬಾರದಿದ್ದಕ್ಕೆ ತಂದೆಯೂ ಮನ ನೊಂದು ಮನೆಯಿಂದ ಹೋಗಿ ನಾಲ್ಕು ವರ್ಷ ಗತಿಸಿವೆ. ಸಂಗಮ್ಮ ಒಬ್ಬಂಟಿಯಾಗಿ ಸಂಬಂಧಿಕರ ನೆರವಿನೊಂದಿಗೆ ದಿನ ದೂಡುತ್ತಿದ್ದಾರೆ.