ಮಕ್ಕಳ ಪ್ರಗತಿಗೆ ಸರ್ಕಾರಿ ಶಾಲೆಯಲ್ಲಿ ಹೋಮ, ಹವನ
Team Udayavani, Aug 25, 2019, 3:02 AM IST
ಖಾನಾಪುರ: ತಾಲೂಕಿನ ಕಾಟಗಾಳಿ ಗ್ರಾಮದ ಸರಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಹೊಂದಿಲ್ಲ. ಇದಕ್ಕೆ ಶಾಲೆಯ ವಾಸ್ತು ದೋಷವೇ ಕಾರಣ ಎಂದು ಗುರುವಾರ ಶಾಲೆಯಲ್ಲಿ ಹೋಮ, ಹವನ ನಡೆಸಲಾಗಿದೆ. ಶಾಲಾ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ.
ಇದರಲ್ಲಿ ಗ್ರಾಮದವರು ಪಾಲ್ಗೊಂಡು ಶಾಲೆಯ ಆವರಣದಲ್ಲಿ ಭೋಜನ ಪ್ರಸಾದ ಕೂಡ ಸ್ವೀಕರಿಸಿದ್ದಾರೆ. ಶಾಲೆಯಲ್ಲಿ ರಾಷ್ಟ್ರೀಯ ಕಾರ್ಯಕ್ರಮ ಹೊರತು ಪಡಿಸಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿಲ್ಲ. ಆದರೆ, ಇಂತಹ ಮೂಢನಂಬಿಕೆಗೆ ಶಾಲಾ ಮುಖ್ಯೋಪಾಧ್ಯಾಯರು ಕೂಡ ಸಹಕರಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಳೆದ ಆರು ವರ್ಷಗಳ ಹಿಂದೆ ಇಲ್ಲಿ ಎರಡು ಕೊಠಡಿಗಳನ್ನು ಹೊಸದಾಗಿ ನಿರ್ಮಿಸಿದ್ದು, 7ನೇ ತರಗತಿವರೆಗೆ ಶಾಲೆ ನಡೆಸಲಾಗುತ್ತಿದೆ. ಆದರೆ, ಗ್ರಾಮಸ್ಥರಿಗೆ ಮಕ್ಕಳು ಅಪೇಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತಿಲ್ಲ ಎನ್ನುವ ಆತಂಕ ಕಾಡುತ್ತಿತ್ತು. ಇದಕ್ಕೆ ಪುರೋಹಿತರು ಸಲಹೆ ನೀಡಿದ್ದು, ಶ್ರಾವಣದಲ್ಲಿ ಹೋಮ ಹವನ ಮಾಡಿದರೆ ದೋಷ ಸರಿಯಾಗುವುದಾಗಿ ಹೇಳಿದ್ದರು. ಅದರಂತೆ ಹೋಮ, ಹವನ ನಡೆಸಲಾಗಿದೆ.