ಮನೆ ಮೇಲ್ಛಾವಣಿ ಕುಸಿದು ಮೂವರ ಸಾವು
Team Udayavani, Aug 27, 2019, 3:00 AM IST
ಸಿರುಗುಪ್ಪ: ಮಳೆಯಿಂದ ತೇವಗೊಂಡ ಮಣ್ಣಿನ ಮನೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟು, ಓರ್ವ ಬಾಲಕ ಹಾಗೂ ಹಸುಗೂಸು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (50), ಮಗಳು ಹಸಿನಾ (25), ಮೊಮ್ಮಗ ಇಮ್ರಾನ್ (3) ಮಲಗಿದ್ದಲ್ಲೇ ಜೀವಬಿಟ್ಟ ದುರ್ದೈವಿಗಳು.
36 ದಿನದ ಮಗುವನ್ನು ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ 2 ದಿನಗಳಿಂದ ಮಳೆಯಾಗಿದ್ದು, ಖಾದರ್ ಬಾಷಾ ಎಂಬುವವರ ಮನೆಯ ಮಣ್ಣಿನ ಗೋಡೆಗಳೆಲ್ಲ ತೇವಗೊಂಡಿದ್ದವು. ಇದಲ್ಲದೆ ಮೇಲ್ಛಾವಣಿ ಸಹ ಶಿಥಿಲ ಗೊಂಡಿತ್ತು ಎನ್ನಲಾಗಿದೆ. ನಿರಂತರ ಮಳೆಯಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ಘಟನೆಯಲ್ಲಿ ಹಸೀನಾಳ ಹಿರಿಯ ಮಗ ಹಾಗೂ ಹಸು ಗೂಸು ಅದೃಷ್ಟವಶಾತ್ ಪಾರಾಗಿದ್ದಾರೆ.
ಭಾನುವಾರ ರಾತ್ರಿ 11 ವರ್ಷದ ಮೆಹಬೂಬ್ ಮನೆಯಲ್ಲಿ ಟಿವಿ ನೋಡುತ್ತ ಗೋಡೆ ಪಕ್ಕದಲ್ಲಿ ಕುಳಿತಿದ್ದ. ಛಾವಣಿ ಕುಸಿ ಯುತ್ತಿರುವುದನ್ನು ನೋಡಿ ಹೊರಗಡೆ ಓಡಿ ಬಂದಿದ್ದಾನೆ. ಅಲ್ಲದೆ ಮಗುವನ್ನು ಮಂಚದ ಉಯ್ನಾಲೆಯಲ್ಲಿ ಹಾಕಿ ಮಲಗಿಸಲಾಗಿದ್ದು, ಮಣ್ಣು ಮಂಚದ ಮೇಲೆ ಬಿದ್ದಿದೆ. ಆದರೆ ಉಯ್ನಾಲೆಯಲ್ಲಿದ್ದ ಮಗು ಪಾರಾಗಿದೆ.