ನನ್ನ ಸ್ಪರ್ಧೆ ಚಾಮುಂಡೇಶ್ವರಿಯಲ್ಲೇ ….; ಇನ್ಯಾವ ಸ್ಪಷ್ಟನೆ ಬೇಕು?
Team Udayavani, Apr 6, 2018, 3:39 PM IST
ಚಾಮುಂಡೇಶ್ವರಿ: ನಾನು ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುತ್ತೇನೆ..ನಾನು ಚಾಮುಂಡೇಶ್ವರಿಯಲ್ಲೇ ಸ್ಪರ್ಧಿಸುತ್ತೇನೆ…ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಪರಿ.
ಸ್ವಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾಯಿಸುತ್ತಿದ್ದೀರಿ ಎನ್ನುವ ಊಹಾಪೋಹಗಳ ಕುರಿತು ಪ್ರಶ್ನಿಸಿದಾಗ ಈ ಉತ್ತರ ನೀಡಿದ್ದಾರೆ.
ಕ್ಷೇತ್ರದ ಜನತೆ ನನ್ನ ಕೈ ಬಿಟ್ಟಿಲ್ಲ, ಬೈ ಎಲೆಕ್ಷನ್ನಲ್ಲಿ ದೇವೇಗೌಡರೂ ಬಂದು ಕೂತಿದ್ದರು ಅವರಿಗೆ ನನ್ನನ್ನು ಸೋಲಿಸಲು ಆಗಲಿಲ್ಲ. ಜಿ.ಟಿ.ದೇವೇಗೌಡಅವರ ಅಪ್ಪನಾಣೆ ಅವರು ಗೆಲ್ಲಲ್ಲ.ಗೆಲುವು ನನ್ನದೆ ಎಂದರು.
ಸುತ್ತೂರು ಶ್ರೀಗಳ ಜೊತೆ ಗುಪ್ತ ಮಾತುಕತೆ
ಚಾಮುಂಡೇಶ್ವರಿ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಪುತ್ರ ಡಾ.ಯತೀಂದ್ರ ಅವರೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಅವರೊಂದಿಗೆ ಮಾತುಕತೆ ನಡೆಸಿದರು. ಕೆಲ ಕಾಲ ಇಬ್ಬರೆ ಗುಪ್ತ ಮಾತುಕತೆಯನ್ನು ನಡೆಸಿದರು ಎಂದು ವರದಿಯಾಗಿದೆ.
ಒಕ್ಕಲಿಗ ಮುಖಂಡರ ಸಭೆಯಲ್ಲಿ ಭಾಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಒಕ್ಕಲಿಗ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದರು. ನಾನು ಎಂದಿಗೂ ಜಾತಿ ಆಧಾರದಲ್ಲಿ ಮತ ಕೇಳಿದವನಲ್ಲ. ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
‘ನನ್ನ ಮೊದಲ ಚುನಾವಣೆಯಲ್ಲಿ ಠೇವಣಿ ಇಡಲು 150 ರೂಪಾಯಿ ಹಣ ನನ್ನ ಬಳಿ ಇರಲಲ್ಲ. ರೈತ ಸಂಘದ ಕ್ಲರ್ಕ್ ಬಳಿ 500 ರೂಪಾಯಿ ಸಾಲ ಪಡೆದು ನಾಮಪತ್ರ ಸಲ್ಲಿಸಿದ್ದೆ. ನಾಮಪತ್ರ ವಾಪಾಸ್ ಪಡೆಯಲು ಸ್ಕೂಟರ್ನಲ್ಲಿ ಹೊರಟಿದ್ದೆ. ಸ್ಕೂಟರ್ ಕೆಟ್ಟಿದ್ದರಿಂದ ನನ್ನ ನಾಮಪತ್ರ ಉಳಿದುಕೊಂಡಿತು’ ಎಂದು ಸಭೆಯಲ್ಲಿ ತಮ್ಮ ರಾಜಕೀಯ ಹಿನ್ನಲೆಯನ್ನು ವಿವರಿಸಿದರು.
ಕೈ ಕಾರ್ಯಕರ್ತರು ಜೆಡಿಎಸ್ಗೆ
ಸಿಎಂ ತಂತ್ರಗಳಿಗೆ ಪ್ರತಿತಂತ್ರ ಹೂಡುತ್ತಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಜಿಟಿಡಿ ಅವರು ಕುರುಬ ಸಮುದಾಯದ ನಾಯಕರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು, ಗೆಲುವು ನನ್ನದೆ ಎನ್ನುತ್ತಿದ್ದಾರೆ.