ಟಿಕೆಟ್ ಸಿಕ್ಕರೆ ಮಂಡ್ಯದಲ್ಲಿ ಸ್ಪರ್ಧಿಸ್ತೇನೆ: ಅಂಬರೀಶ್
Team Udayavani, Nov 29, 2017, 8:29 AM IST
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಪಕ್ಷದ ಟಿಕೆಟ್ ನೀಡಿದರೆ ನಾನೇ ಸ್ಪರ್ಧಿಸುವುದಾಗಿ ಹೇಳಿರುವ ಕಾಂಗ್ರೆಸ್ ಶಾಸಕ ಅಂಬರೀಶ್, ಪತ್ನಿ ಅಥವಾ ಪುತ್ರ ಚುನಾವಣಾ ಕಣಕ್ಕಿಳಿಯುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಚುನಾವಣೆಗೆ ಸ್ಪರ್ಧಿಸಬೇಕೆ? ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಆದರೆ, ನನ್ನ ಪತ್ನಿ ಮತ್ತು ಮಗ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ’ ಎಂದರು. “ಕಾಂಗ್ರೆಸ್ ಟಿಕೆಟ್
ಖಾತರಿಯಾಗದಿದ್ದರೆ ಜೆಡಿಎಸ್ ಅಥವಾ ಬಿಜೆಪಿ ಜತೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ, “ಎರಡೂ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದು, ಒಟ್ಟಿಗೆ ಊಟ ಮಾಡುತ್ತೇವೆ ಮತ್ತು ಮಾತನಾಡುತ್ತೇವೆ. ನಾನು ಜೆಡಿಎಸ್ನಿಂದ ಸಂಸದನಾಗಿದ್ದವನು. ಹೀಗಾಗಿ ದೇವೇಗೌಡರ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಜನ ಬಯಸಿದರೆ ಚುನಾವಣೆ ಯಲ್ಲಿ ಸ್ಪರ್ಧಿಸುತ್ತೇನೆ. ಅವರು ಬಯಸಿದರೆ ಮಾತ್ರ ರಾಜಕಾರಣದಲ್ಲಿರಲು ಸಾಧ್ಯ’ ಎಂದರಷ್ಟೇ ಹೊರತು ನೇರ ಉತ್ತರ ನೀಡಲಿಲ್ಲ.
ನಟಿ ರಮ್ಯಾ ಈಗ ಸ್ಟಾರ್ ಪ್ರಚಾರಕಿ. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಅವರಿಗೆ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಅವರ ಪರ ಕೆಲಸ ಮಾಡಲೇಬೇಕು ಮತ್ತು ಮಾಡುತ್ತೇನೆ. ರಮ್ಯಾ, ಸೌಮ್ಯಾ, ಸುಮಾ ಯಾರಿಗೇ ಪಕ್ಷದಿಂದ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ.
●ಅಂಬರೀಶ್, ಕಾಂಗ್ರೆಸ್ ಶಾಸಕ