ನಾನೂ ಬೇಕಾದ್ರೆ ಆಪರೇಷನ್ ಮಾಡ್ಬಹುದು
Team Udayavani, Jan 15, 2019, 6:53 AM IST
ಬೆಂಗಳೂರು: ‘ನಾನು ಮನಸ್ಸು ಮಾಡಿದರೆ ಈಗ ಆಪರೇಷನ್ ಮಾಡಬಹುದು. ಅದನ್ನು ಮಾಡೋದು ದೊಡ್ಡ ವಿಚಾರವೂ ಅಲ್ಲ. ಆದರೆ, ನನಗೆ ಅದರ ಅವಶ್ಯಕತೆಯಿಲ್ಲ. ಯಾಕೆಂದರೆ, ಈಗಾಗಲೇ ನಾವು 120 ಶಾಸಕರಿದ್ದೇವೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.
ನಗರದ ಕೆಇಬಿ ಎಂಜಿನಿಯರ್ ಅಸೋಸಿಯೇ ಷನ್ ಕಟ್ಟಡದಲ್ಲಿ ಸೋಮವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾವುದೇ ಬಿಜೆಪಿ ಶಾಸಕರನ್ನೂ ಸಂಪರ್ಕಿಸಿಲ್ಲ. ಹಾಗೊಂದು ವೇಳೆ ಸಂಪರ್ಕಿಸಿರುವ ಬಗ್ಗೆ ಮಾಹಿತಿ ಇದ್ದರೆ ಬಹಿರಂಗಪಡಿಸಲಿ. ಅದು ಬಿಟ್ಟು ಹೀಗೆ ಸುಳ್ಳು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಅಷ್ಟಕ್ಕೂ ನಾನು ಈಗ ಮನಸ್ಸು ಮಾಡಿದರೆ ಆಪರೇಷನ್ ಮಾಡಬಹುದು. ನಾವೆಲ್ಲಾ ಕಾನೂನಿನಡಿ ಕೆಲಸ ಮಾಡಬೇಕಾಗುವುದರಿಂದ ಹಾಗೆ ಮಾಡುವುದಿಲ್ಲ’ ಎಂದು ಹೇಳಿದರು.
ಜೆಡಿಎಸ್ನಿಂದ ಆಪರೇಷನ್ ನಡೆಯುತ್ತಿದೆ ಎಂಬುದು ಸುಳ್ಳು. ಈ ಹಿಂದೆ ಯಡಿಯೂರಪ್ಪ 20 ಶಾಸಕರ ರಾಜೀನಾಮೆ ಕೊಡಿಸಿದ್ದರು. ನಾನು ಆ ರೀತಿ ಮಾಡುವುದು ದೊಡ್ಡ ವಿಚಾರ ಅಲ್ಲ ಎಂದು ಎಚ್ಚರಿಕೆ ನೀಡಿದರು.
ಯಾರನ್ನು ಸಂಪರ್ಕಿಸಿದ್ದಾರೆಂಬುದು ಗೊತ್ತು; ಆಪರೇಷನ್ ಮಾಡಲ್ಲ ಎನ್ನುತ್ತಿರುವ ಬಿಜೆಪಿ, ತನ್ನ 104 ಶಾಸಕರನ್ನು ದೆಹಲಿಯಲ್ಲಿ ಯಾಕೆ ಇಟ್ಟುಕೊಂಡಿದೆ. ಮುಂಬೈನಲ್ಲಿ ಯಾವ ರೆಸಾರ್ಟ್ನಲ್ಲಿ ಯಾರ ಹೆಸರಿನಲ್ಲಿ ರೂಂ ಬುಕ್ ಆಗಿದೆ? ಬಿಜೆಪಿಯವರು ಯಾರ್ಯಾರನ್ನು ಸಂಪರ್ಕಿಸಿ¨್ದಾರೆಂಬ ಎÇ್ಲಾ ಮಾಹಿತಿ ನನಗಿದೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆಂದ ಕುಮಾರಸ್ವಾಮಿ, ‘ಶಾಸಕರಾದ ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ನಾಗೇಂದ್ರ ಅವರೊಂದಿಗೆ ನಾನು ಮಾತನಾಡಿದ್ದೇನೆ. ಅವರೆಲ್ಲಾ ನಿಮಗೆ (ಮಾಧ್ಯಮದವರಿಗೆ) ‘ನಾಟ್ ರೀಚಬಲ್’ ಆಗಿರಬಹುದು. ಆದರೆ, ನಾನು ಅವರ ಜತೆ ಫೋನ್ನಲ್ಲಿ ಮಾತನಾಡಿದ್ದೇನೆ. ಅದೇ ರೀತಿ, ಬಿ.ಸಿ ಪಾಟೀಲ್ ನಮ್ಮ ಸಹೋದರರು. ಅವರೊಂದಿಗೂ ಚರ್ಚಿಸಿದ್ದೇನೆ. ಬಿ.ಸಿ. ಪಾಟೀಲ್ ಕೂಡ ಬಿಜೆಪಿಗೆ ಹೋಗುವುದಿಲ್ಲ. ಅವರು ತಮ್ಮ ಪುತ್ರಿಯ ಮದುವೆ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ನಮ್ಮ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ’ ಎಂದು ಸ್ಪಷ್ಟಪಡಿಸಿದರು.