ನಿಷ್ಠರ ಕಡೆಗಣಿಸಿ ಮುನಿದವರಿಗೆ ಸಚಿವಗಿರಿ ಸಲ್ಲ: ಬಯ್ಯಾಪೂರ
Team Udayavani, Jun 6, 2019, 3:00 AM IST
ಕುಷ್ಟಗಿ: ಪಕ್ಷದ ಹಾಗೂ ಮುಖಂಡರ ವಿರುದ್ಧ ಮುನಿಸಿಕೊಂಡವರಿಗೆ ಕರೆದು ಮಂತ್ರಿ ಸ್ಥಾನ ಕೊಡುವುದು ಸರಿಯಾದ ಕ್ರಮ ಅಲ್ಲ. ಪಕ್ಷ ನಿಷ್ಠರಿಗೂ ಆದ್ಯತೆ ನೀಡಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
“ಉದಯವಾಣಿ’ ಜತೆ ಮಾತನಾಡಿದ ಅವರು, ಪಕ್ಷದಲ್ಲಿನ ಈ ರೀತಿಯ ಆಂತರಿಕ ಭಿನ್ನಾಭಿಪ್ರಾಯವನ್ನು ಹೈಕಮಾಂಡ್ ಗಮನಿಸಿ, ಕೂಡಲೇ ಶಮನಗೊಳಿಸಬೇಕಿತ್ತು. ರಾಮಲಿಂಗಾರೆಡ್ಡಿ ಅವರಂತಹ ಹಿರಿಯರಿಗೆ ಆದ್ಯತೆ ಮೇರೆಗೆ ಮಂತ್ರಿ ಸ್ಥಾನ ಕೈ ತಪ್ಪಿರುವುದು ನೋವಾಗಿದೆ.
ಅವರ ಅಸಮಾಧಾನಕ್ಕೆ ನನ್ನ ಸಹಮತವಿದೆ. ಪಕ್ಷ ನಿಷ್ಠರಿಗೆ ಮಂತ್ರಿ ಸ್ಥಾನ ಕೊಡುವುದರಿಂದ ಮಂತ್ರಿ ಸ್ಥಾನದ ಗೌರವ ಹೆಚ್ಚುತ್ತದೆ. ಯಾವುದೇ ಕಾರಣಕ್ಕೂ ಪಕ್ಷ ನಿಷ್ಠರನ್ನು ಕಡೆಗಣಿಸಬಾರದು. ಈ ನಿಟ್ಟಿನಲ್ಲಿ ಉಂಟಾಗಿರುವ ಗೊಂದಲವನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸರಿಪಡಿಸಬೇಕು ಎಂದರು.