22 ಸೀಟು ಗೆದ್ದರೆ 24 ತಾಸೊಳಗೆ ರಾಜ್ಯದಲ್ಲಿ BJP ಸರಕಾರ: ಯಡಿಯೂರಪ್ಪ
Team Udayavani, Mar 13, 2019, 5:56 AM IST
ಬೆಂಗಳೂರು : 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕನಿಷ್ಠ 22 ಸೀಟುಗಳನ್ನು ಗೆದ್ದರೆ ಮುಂದಿನ 24 ತಾಸುಗಳ ಒಳಗೆ ರಾಜ್ಯದಲ್ಲಿ BJP ಸರಕಾರ ರಚಿಸಲಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಲಿಂಗಾಯತ ಸಮುದಾಯದ ಬಲಿಷ್ಠ ರಾಜಕೀಯ ಮುಂದಾಳು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದ ಮತದಾರರು ಹೊಸ ಅಭಿವೃದ್ಧಿಯ ಯುಗವನ್ನು ಕಾಣಲು ಬಯಸಿದಲ್ಲಿ ಅವರು ಬಿಜೆಪಿಗೆ ಮತ ಹಾಕಬೇಕು ಎಂದು ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಯಡಿಯೂರಪ್ಪ ಅವರ ಈ ಮಾತುಗಳನ್ನು ಉಲ್ಲೇಖೀಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯಡಿಯೂರಪ್ಪ ಅವರು ನಿನ್ನೆ ಮಂಗಳವಾರ ಯರಗಟ್ಟಿ ಗ್ರಾಮದಲ್ಲಿ ಸಾರ್ವಜನಿಕ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಚುನಾವಣಾ ಆಯೋಗ 2019ರ ಲೋಕಸಭಾ ಚುನಾವಣೆಗಳ ವೇಳಾ ಪಟ್ಟಿಯನ್ನು ಪ್ರಕಟಿಸಿದ ಎರಡು ದಿನಗಳ ತರುವಾಯ ಯಡಿಯೂರಪ್ಪ ಅವರಿಂದ ಈ ವಿವಾದಿತ ಹೇಳಿಕೆ ಬಂದಿದೆ.
ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕರೂ ಆಗಿರುವ ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.