ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ನ ಭ್ರಷ್ಟಾಚಾರಗಳ ಮರು ತನಿಖೆ
Team Udayavani, Dec 16, 2017, 8:57 AM IST
ಲಿಂಗಸುಗೂರು /ಕಾರಟಗಿ: ಕಾಂಗ್ರೆಸ್ ಅವಧಿಯಲ್ಲಿನ ಭ್ರಷ್ಟಾಚಾರಗಳನ್ನು ಎಸಿಬಿ, ಸಿಒಡಿ ಮೂಲಕ ತನಿಖೆ ನಡೆಸಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕ್ಲೀನ್ ಚಿಟ್ ನೀಡಿ ರಕ್ಷಿಸಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಕಾಂಗ್ರೆಸ್ ಸರ್ಕಾರದ
ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಮರು ತನಿಖೆಗೆ ಆದೇಶಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಹೇಳಿದರು.
ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ನಡೆದ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚೇ ದಿನ್ ಯಾವಾಗ ಬರುತ್ತೆ ಅಂತಾ ಕೇಳುತ್ತಿದ್ದಾರೆ. ಅವರ ತುಘಲಕ್ ದರ್ಬಾರ್ ಕೊನೆ ಆಗಲು ಇನ್ನು ನೂರು ದಿನ ಮಾತ್ರ ಬಾಕಿ ಇದೆ. ನಂತರ ಜನತೆ ಅವರನ್ನು ಮನೆಗೆ ಕಳುಹಿಸಲಿದ್ದಾರೆ. ಆಗ ರಾಜ್ಯದ ಜನತೆಗೆ ಅಚ್ಚೆ ದಿನ್ ಅರಿವಿಗೆ ಬರಲಿದೆ ಎಂದರು.
ನಂತರ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಮಾತನಾಡಿ, “ಸಿದ್ದರಾಮಯ್ಯನವರು ಅಧಿಕಾರದ ಮದದಿಂದ ಮೋದಿಯವರು ನನ್ನನ್ನು ಕಂಡು ಹೆದರುತ್ತಾರೆ’ ಎಂದು ಹೇಳುತ್ತಾರೆ. “ಮೋದಿಯವರ ಮುಂದೆ ನೀನೊಬ್ಬ ಬಚ್ಚಾ’ ಎಂದು ಕಿಡಿಕಾರಿದರು. ಸರ್ಕಾರದ ಪ್ರಚಾರಕ್ಕಾಗಿ 600 ಕೋಟಿ ರೂ.ಹಣ ಖರ್ಚು ಮಾಡುತ್ತಿದ್ದಾರೆ. ಇದು ಜನರ ದುಡ್ಡು. ಈ ರೀತಿ ಜನರ ದುಡ್ಡನ್ನು ಪೋಲು
ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕಳಸಾ-ಬಂಡೂರಿ ಯೋಜನೆ ಜಾರಿ ಕುರಿತಂತೆ ಕಾಂಗ್ರೆಸ್ನವರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇನ್ನು 8ರಿಂದ 10 ದಿನಗಳಲ್ಲಿ ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಗೊಳಿಸಿ ಜನರ ಬಹು ದಿನಗಳ ಬೇಡಿಕೆ ಈಡೇರಿಸುತ್ತೇನೆ.
●ಯಡಿಯೂರಪ್ಪ, ಮಾಜಿ ಸಿಎಂ