ಮೈತ್ರಿ ಸರ್ಕಾರ ಬಿದ್ರೆ, ನಾವು ಸರ್ಕಾರ ನಡೆಸ್ತೇವೆ: ಬಿಎಸ್ವೈ
Team Udayavani, Jun 9, 2019, 3:00 AM IST
ಕೊಪ್ಪಳ: ನಾವು ಹಿಂದೆಯೂ ಯಾವುದೇ ಆಪರೇಷನ್ ಮಾಡಿಲ್ಲ. ಮುಂದೆಯೂ ಆಪರೇಷನ್ ಮಾಡಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಕಚ್ಚಾಡಿ ಬಿದ್ದರೆ ನಾವು ಸರ್ಕಾರ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೇ ವರ್ಷದಲ್ಲಿ ಚುನಾವಣೆಗೆ ಹೋಗಲು ನಾವು ಇಷ್ಟಪಡಲ್ಲ. ಜನ ಸಹಿತ ಅದನ್ನು ಒಪ್ಪಲ್ಲ. ಕಚ್ಚಾಡಿ ಸರ್ಕಾರ ಕೆಡವಿದರೆ ನಾವೇ ಸರ್ಕಾರ ನಡೆಸುತ್ತೇವೆ. ಸಚಿವ ಸ್ಥಾನಕ್ಕಾಗಿ ಕಚ್ಚಾಡುತ್ತಿದ್ದಾರೆ. ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರಂತೆ. ಅವರಿಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂದರು.
ಮೃತ ರೈತನ ಕುಟುಂಬಕ್ಕೆ 50 ಸಾವಿರ: ಜಿಲ್ಲೆಯ ಕೂಕನಪಳ್ಳಿಗೆ ತೆರಳಿದ ಬಿಎಸ್ವೈ, ಗ್ರಾಮದಲ್ಲಿನ ಬೆಟ್ಟದ ಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಹಿರೇ ವಂಕಲಕುಂಟಾ ಗ್ರಾಮಕ್ಕೆ ತೆರಳಿ ಪ್ರಸಿದ್ಧ ಹನುಮಪ್ಪನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಬಳಿಕ, ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಹನುಮಂತಪ್ಪ ಗದ್ದಿ ಅವರ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ.ಸಹಾಯಧನ ನೀಡಿದರು.