ರಾಜ್ಯದಲ್ಲಿ 2.5 ಲಕ್ಷ ಬಾಂಗ್ಲಾದೇಶಿಗರು ವಾಸ: ಎಲ್ಲರ ಬಳಿ ಇದೆ ಭಾರತದ ಆಧಾರ್ ಕಾರ್ಡ್
ಇತರ ಗುರುತಿನ ಚೀಟಿ ಪತ್ತೆ
Team Udayavani, Jun 18, 2022, 5:45 AM IST
ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸಕ್ರಮಗೊಳಿಸುವ ಕೆಲಸ ನಡೆಯುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಬಾಂಗ್ಲಾದೇಶಿಗರು ವಾಸವಾಗಿದ್ದು, ಎಲ್ಲರೂ ಆಧಾರ್ ಕಾರ್ಡ್ ಹಾಗೂ ಇತರ ಗುರುತಿನ ಚೀಟಿ ಹೊಂದಿದ್ದಾರೆ ಎನ್ನುವ ಮಾಹಿತಿ ಪತ್ತೆಯಾಗಿದೆ.
ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳ ಪ್ರಕಾರ, ಈ ಅಕ್ರಮ ವಲಸಿಗರು ಮೂಲತಃ ಬಾಂಗ್ಲಾದೇಶ ಪ್ರಜೆಗಳಾಗಿದ್ದರೂ ಅವರ ಬಳಿ ಭಾರತದ ಆಧಾರ್ ಕಾರ್ಡ್, ಚುನಾವಣ ಗುರುತಿನ ಚೀಟಿ, ಇತ್ಯಾದಿ ದಾಖಲೆಗಳು ಪತ್ತೆಯಾಗಿವೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪೈಕಿ ಬೆಂಗಳೂರಿನ ಆಸು-ಪಾಸಿನಲ್ಲಿಯೇ ಎರಡು ಲಕ್ಷಕ್ಕೂ ಅಧಿಕ ಮಂದಿ ಅಕ್ರಮ ವಲಸಿಗರು ವಾಸವಾಗಿರುವುದು ಗೊತ್ತಾಗಿದೆ.
ಕೇಂದ್ರ ಮತ್ತು ರಾಜ್ಯದ ಗುಪ್ತಚರ ಇಲಾಖೆ, ಆಂತರಿಕ ಭದ್ರತಾ ವಿಭಾಗ ಮತ್ತು ಇತರೆ ತನಿಖಾ ಸಂಸ್ಥೆಗಳು ಈ ಬಗ್ಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದು, ಈಗಾಗಲೇ ರಾಜ್ಯದ ತನಿಖಾ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತೀ ಠಾಣೆ ವ್ಯಾಪ್ತಿಯಲ್ಲಿ 8-10 ಸಾವಿರ ಮಂದಿ
ಬೆಂಗಳೂರು ಸಿಟಿ, ಗ್ರಾಮಾಂತರ ಮತ್ತು ಅಕ್ಕ-ಪಕ್ಕದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಖಾಲಿ ನಿವೇಶನಗಳನ್ನು ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದವರು ಭೋಗ್ಯಕ್ಕೆ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿ ಬಾಂಗ್ಲಾದೇಶೀಯರಿಗೆ ನೀಡುತ್ತಿದ್ದಾರೆ. ಚಿಕ್ಕಮಗಳೂರು, ಕೊಡಗು, ಮಡಿಕೇರಿ ಭಾಗದ ಎಸ್ಟೇಟ್ಗಳಲ್ಲೂ ಬಾಂಗ್ಲಾದೇಶ ಪ್ರಜೆಗಳು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
16 ಸಾವಿರ ರೂ.ಗೆ ಬಾಂಗ್ಲಾ ಟು ಬೆಂಗಳೂರು
ಬಾಂಗ್ಲಾದೇಶದ ಗಡಿದಾಟಿಸಿ ಬೆಂಗಳೂರಿಗೆ ಕಳುಹಿಸುವ ವ್ಯಕ್ತಿಗಳು ದೇಶದ ಗಡಿಭಾಗದಲ್ಲಿ ಸಕ್ರಿಯವಾಗಿದ್ದಾರೆ. ತಲಾ 16 ಸಾವಿರ ರೂ. ನೀಡಿದರೆ ಮಧ್ಯ ವರ್ತಿಗಳು ಬಾಂಗ್ಲಾದೇಶದ ಪ್ರಜೆಗಳನ್ನು ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ಕರೆಸಿಕೊಳ್ಳುತ್ತಾರೆ.