ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸರು, ಸರ್ಕಾರ ಎಲ್ಲರೂ ಇದ್ದಾರೆ: ಪ್ರಿಯಾಂಕ್ ಖರ್ಗೆ
Team Udayavani, Nov 12, 2021, 4:06 PM IST
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರದಿಂದ ಸ್ಪಷ್ಟ ಸತ್ಯಾಂಶ ಹೊರಬರುವುದಿಲ್ಲ. ಯಾಕೆಂದರೆ ಎಲ್ಲರೂ ಇದರಲ್ಲಿದ್ದಾರೆ. ಪೊಲೀಸ್, ಸರ್ಕಾರ ಎಲ್ಲರೂ ಇದ್ದಾರೆ. ಇಲ್ಲಿ ಯಾರು ತನಿಖೆ ಮಾಡಿದರೂ ಸತ್ಯಾಂಶ ಹೊರಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರ ತನಿಖೆ ಸತ್ಯ ಹೊರತರಲು ಅಲ್ಲ, ಸತ್ಯವನ್ನು ಮುಚ್ಚಿ ಹಾಕಲು ತನಿಖೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರ ಬರಲಿದೆ. ಸತ್ಯಾಂಶ ಹೊರಬಂದ ನಂತರ ಕ್ರಮ ಆಗಲಿದೆ ಎಂದು ಹೇಳಿದರು.
ಮಾಜಿ ಗೃಹ ಸಚಿವರು, ಹಾಲಿ ಮುಖ್ಯಮಂತ್ರಿಗಳು ಸರ್ವಜ್ಙರಿದ್ದಂತೆ. ಇದರ ಬಗ್ಗೆ ನಿಜಾಂಶ ಅವರೇ ಹೇಳಲಿ ಬಿಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಪೊಲೀಸ್, ಕೋರ್ಟ್ ಅಗತ್ಯವಿಲ್ಲವೇ? PM ಏಕಪಕ್ಷೀಯ ತೀರ್ಮಾನವೇ ಅಂತಿಮವೇ? ಸಿದ್ದರಾಮಯ್ಯ ಪ್ರಶ್ನೆ
ತನಿಖೆ ನಡೆದರೆ ಸಿಎಂ ಬದಲಾಗುತ್ತಾರೆ ಎಂಬ ಹೇಳಿಕೆ ಬಗ್ಗೆ ಮತ್ತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮೂರನೇ ಸಿಎಂ ಯಾರು ಬೇಕಾದರೂ ಆಗಲಿ. ನಾನು ಯಾರ ಹೆಸರನ್ನೂ ಇಲ್ಲಿ ಹೇಳುವುದಿಲ್ಲ. ಆದರೆ ಮೂರನೇ ಮುಖ್ಯಮಂತ್ರಿಯಾಗುವುದು ನಿಜ. ನನ್ನ ಮಾತಿಗೆ ಈಗಲೂ ಬದ್ದ ಎಂದರು.