ಕಾಂಟ್ರಾಕ್ಟರ್ಗಳ ‘ಕೈ’ಯಲ್ಲಿ ಟಿಕೆಟ್ !;ಮೊಯ್ಲಿ ಟ್ವೀಟ್ ಸಂಚಲನ
Team Udayavani, Mar 16, 2018, 10:15 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಸಂಸದ ವೀರಪ್ಪ ಮೊಯ್ಲಿ ಮತ್ತು ಅವರ ಪುತ್ರ ಹರ್ಷ ಮೊಯ್ಲಿ ಅವರ ಪುನರಾವರ್ತಿತ ಒಂದೇ ಟ್ವೀಟ್ಗಳು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿವೆ.
‘ಕಾಂಗ್ರೆಸ್ ಹಣದ ರಾಜಕೀಯಕ್ಕೆ ಅಂತ್ಯ ಹಾಡಬೇಕಿದೆ. ರಸ್ತೆ ಗುತ್ತಿಗೆ ದಾರರು ಮತ್ತು ಅವರೊಂದಿಗೆ ಅಪವಿತ್ರ ಸಂಬಂಧ ಹೊಂದಿರುವ ರಾಜ್ಯದ ಪಿಡಬ್ಲ್ಯೂಡಿ ಮಂತ್ರಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ’ ಎಂದು ಟ್ವೀಟ್ನಲ್ಲಿ ಬರೆದು ಐಎನ್ಸಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟರ್ಗೆ ಟ್ಯಾಗ್ ಮಾಡಿದ್ದಾರೆ.
ಹರ್ಷ ಮೊಯ್ಲಿ ಅವರು ಇದೇ ಟ್ವೀಟ್ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರು ಪಕ್ಷ ಸೇರ್ಪಡೆಯಾದ ವಿರುದ್ಧ ತಮ್ಮ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಇನ್ನೊಂದೆಡೆ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಹರ್ಷ ಅವರು ಪ್ರಯತ್ನ ಮಾಡುತ್ತಿದ್ದು, ಆ ಟಿಕೆಟ್ ಕೂಡ ಗುತ್ತಿಗೆದಾರರಾಗಿರುವ ಕಾಂಗ್ರೆಸ್ ಮುಖಂಡರೊಬ್ಬರಿಗೆ ದೊರಕುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಈ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಪರಮಾಪ್ತ,ಲೋಕೊಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರ ವಿರುದ್ಧವೂ ಟ್ವೀಟ್ನಲ್ಲಿ ಆಪಾದನೆಯನ್ನು ಮಾಡಿರುವುದು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಟ್ವೀಟ್ ನನ್ನದಲ್ಲ
ಮೊಯ್ಲಿ ಅವರು ಈ ಟ್ವೀಟ್ಗಳ ಕುರಿತು ಪ್ರತಿಕ್ರಿಯೆ ನೀಡಿದ್ದು ಈ ಟ್ವೀಟ್ಗೂ ನನಗೂ ಸಂಬಂಧವಿಲ್ಲ. ನಾನು ಈ ಟ್ವೀಟ್ ಮಾಡಿಯೇ ಇಲ್ಲ. ನನ್ನ ಮಗನೂ ಈ ರೀತಿ ಟ್ವೀಟ್ ಮಾಡಿರಲಿಕ್ಕಿಲ್ಲ . ಆ ಟ್ವೀಟ್ಗಳನ್ನು ಕೂಡಲೇ ತೆಗೆದು ಹಾಕುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಟ್ವೀಟ್ ಕುರಿತು ಭಾರಿ ಚರ್ಚೆಯಾಗುತ್ತಿದ್ದಂತೆ ವೀರಪ್ಪ ಮೊಯ್ಲಿ ಮತ್ತು ಹರ್ಷ ಅವರು ಟ್ವೀಟ್ಗಳನ್ನು ಅಳಿಸಿ ಹಾಕಿದ್ದಾರೆ.