ಕಮಲ ಪಾಳಯದಲ್ಲಿ ಹೆಚ್ಚಿದ ಉತ್ಸಾಹ- ವಿಶ್ವಾಸ
Team Udayavani, May 20, 2019, 3:05 AM IST
ಬೆಂಗಳೂರು: ದೇಶದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತದ ಜತೆಗೆ ರಾಜ್ಯದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವುದಾಗಿ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವುದು ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ ಹೆಚ್ಚಿಸಿದೆ. ಸದ್ದಿಲ್ಲದೆ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ.
ಬಹುತೇಕ ಎಲ್ಲ ಸಮೀಕ್ಷೆಗಳೂ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿರುವುದರಿಂದ ಸಂತಸದಲ್ಲಿರುವ ಬಿಜೆಪಿ ನಾಯಕರು, ಬಹುತೇಕ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂದಿದ್ದು, ಇದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಉಂಟಾಗುವ ಪರಿಣಾಮ ಆಧರಿಸಿ ಮುಂದಿನ ರಾಜಕೀಯ ದಾಳ ಉರುಳಿಸಲು ಸಿದ್ದತೆ ನಡೆಸಿದ್ದಾರೆ.
ಈ ಬಾರಿ ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆ ಘೋಷಣೆಗೂ ಮೊದಲಿನಿಂದಲೇ ಹೇಳಲಾರಂಭಿಸಿದ್ದರು. ಇದಕ್ಕೆ ರಾಜ್ಯ ಬಿಜೆಪಿಯ ಇತರ ನಾಯಕರು ದನಿಗೂಡಿಸಿದ್ದರು.
ಕಾಂಗ್ರೆಸ್, ಜೆಡಿಎಸ್ನ ಘಟಾನುಘಟಿ ನಾಯಕರು, ಸೋಲಿಲ್ಲದ ಸರದಾರರೆನಿಸಿಕೊಂಡವರು ಈ ಬಾರಿ ಸೋಲಿನ ರುಚಿ ಸವಿಯಲಿದ್ದಾರೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಬಿಜೆಪಿಯ ಆತ್ವವಿಶ್ವಾಸವನ್ನು ಹೆಚ್ಚಿಸಿವೆ.
ರಾಜ್ಯದಲ್ಲಿ ಸದ್ಯ ಬಿಜೆಪಿ 16 ಸ್ಥಾನ ಹೊಂದಿದ್ದು, ಅಷ್ಟು ಸ್ಥಾನಗಳನ್ನು ಉಳಿಸಿಕೊಳ್ಳುವ ಎಲ್ಲ ಸಾಧ್ಯತೆಯನ್ನು ಸಮೀಕ್ಷೆಗಳು ವ್ಯಕ್ತಪಡಿಸಿವೆ. ಹಾಗಾಗಿ, ಹೆಚ್ಚುವರಿಯಾಗಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಎಂಟು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳನ್ನು ಗೆಲ್ಲುವ ಮೂಲಕ 22 ಸ್ಥಾನ ಗೆಲ್ಲುವ ಗುರಿ ತಲುಪುವ ವಿಶ್ವಾಸದಲ್ಲಿದ್ದಾರೆ. ಇದೀಗ ಸಮೀಕ್ಷಾ ವರದಿಗಳು ಈ ರೀತಿಯ ಲೆಕ್ಕಾಚಾರದ ವರದಿಯನ್ನು ನೀಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಸದ್ಯ ಸಂತಸ ಮೂಡಿಸಿದೆ.
ಆಂತರಿಕ ಸಮೀಕ್ಷೆಯಲ್ಲಿತ್ತು ಸುಳಿವು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮೊದಲ ಸುತ್ತಿನ ಮತದಾನಕ್ಕೂ ಕೆಲ ದಿನ ಬಾಕಿ ಇರುವಂತೆ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಸುಳಿವು ಸಿಕ್ಕಿತ್ತು. ಹಾಲಿ 2-3 ಸಂಸದರು ಪರಾಭವಗೊಂಡರೂ ಹೊಸ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಗ್ಗೆ ಸಮೀಕ್ಷಾ ವರದಿಯಲ್ಲಿ ದಾಖಲಾಗಿತ್ತು.
ಹಾಗಾಗಿ, ಗೆಲ್ಲುವ ಸಾಧ್ಯತೆ ಶೇ.50ರಷ್ಟಿರುವ ಕ್ಷೇತ್ರಗಳಲ್ಲೂ ಹೆಚ್ಚು ಶ್ರಮ ವಹಿಸಿ ಮತದಾರರನ್ನು ಸೆಳೆಯುವ ಕಸರತ್ತು ಮಾಡಿತ್ತು. ಈ ಪ್ರಯತ್ನಗಳೆಲ್ಲಾ ಕೈಹಿಡಿದಿವೆಯೇ ಎಂಬುದು ಫಲಿತಾಂಶ ಪ್ರಕಟವಾದ ನಂತರವಷ್ಟೇ ಗೊತ್ತಾಗಲಿದೆ.
ರಾಜಕೀಯ ಲೆಕ್ಕಾಚಾರ ಶುರು: ರಾಜ್ಯ ಬಿಜೆಪಿ ನಾಯರು ನಿರೀಕ್ಷಿಸಿದಂತೆಯೇ ಸದ್ಯ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಕಂಡು ಬಂದಿದೆ. ಈ ಸಮೀಕ್ಷಾ ವರದಿಗಳ ಜತೆಗೆ ಪಕ್ಷದ ಆಂತರಿಕ ಸಮೀಕ್ಷಾ ವರದಿಗಳನ್ನು ತಾಳೆ ಹಾಕಿ ಪರಿಶೀಲಿಸಲು ಬಿಜೆಪಿ ಸಜ್ಜಾಗಿದೆ. ಇನ್ನೊಂದೆಡೆ, ಜೆಡಿಎಸ್ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.
ಇದು ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂಬುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಬಳಿ ಅಹವಾಲು ತೋಡಿಕೊಂಡಿದ್ದಾರೆ. ಇದು ಮುಂದೆ ಮೈತ್ರಿ ಸರ್ಕಾರದ ಮೇಲೆ ಬೀರುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚಿಸಿ ಮುಂದುವರಿಯಲು ಬಿಜೆಪಿ ನಾಯಕರು ಚಿಂತಿಸಿದ್ದಾರೆ ಎನ್ನಲಾಗಿದೆ.