ಹುಬ್ಬಳ್ಳಿ: ಅತಿವೃಷ್ಟಿ, ಪ್ರವಾಹದಿಂದ ನಾಶವಾದ ಜಮೀನುಗಳಿಗೆ ಅಂತರ ಸಚಿವಾಲಯ ಅಧ್ಯಯನ ತಂಡ ಭೇಟಿ
Team Udayavani, Sep 8, 2022, 10:38 AM IST
ಹುಬ್ಬಳ್ಳಿ: ಜಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ನಾಶವಾಗಿರುವ ಜಮೀನುಗಳಿಗೆ ಕೇಂದ್ರ ಸರ್ಕಾರದ ಅಂತರ ಸಚಿವಾಲಯ ಅಧ್ಯಯನ ತಂಡ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿತು.
ಕಿರೇಸೂರು ಗ್ರಾಮದ ಲಿಂಗನಗೌಡ ರಾಯಣ್ಣ ಗೌಡ ಅವರ ಒಂದು ಎಕರೆ ಹತ್ತಿ ಜಮೀನು ಹಾಗೂ 1 ಎಕರೆ ಹೆಸರು ಪ್ರದೇಶ ವೀಕ್ಷಣೆ ಮಾಡಿದರು. ಸಿ.ಎಂ ಹುಲ್ಲಿಕಟ್ಟಿ ಅವರ ಉದ್ದಿನ ಜಮೀನು ವೀಕ್ಷಿಸಿದರು. ಪ್ರವೀಣ ಕಮಡೋಳಿ ಅವರ ಈರುಳ್ಳಿ ಜಮೀನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈಗಾಗಲೇ ಜಿಲ್ಲಾಡಳಿತದಿಂದ ಪರಿಶೀಲಿಸಿ ವರದಿ ತಯಾರಿಸಲಾಗಿದೆ. ಈ ತಂಡ ಆ ವರದಿ ಹಾಗೂ ಅವರು ಸ್ವತಃ ಹಲವಾರು ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವರು ಎಂದರು.
ಕೇಂದ್ರ ಜಲ ಶಕ್ತಿ ಸಚಿವಾಲಯ ನಿರ್ದೇಶಕ ಅಶೋಕ ಕುಮಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರಿಂಗ್ ವಿ.ವಿ.ಶಾಸ್ತ್ರಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಜಿಪಂ ಸಿಇಒ ಡಾ. ಸುರೇಶ ಇಟ್ನಾಳ ಸೇರಿದಂತೆ ಇನ್ನಿತರರಿದ್ದರು.