ಸುಮಲತಾ ಬೆಂಬಲ ಕೋರಿದ ನಾರಾಯಣಗೌಡ?
Team Udayavani, Sep 2, 2019, 3:04 AM IST
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧವೇ ಗುಡುಗಿದ್ದ ಅನರ್ಹ ಶಾಸಕ ಕೆ.ಆರ್.ಪೇಟೆಯ ನಾರಾಯಣಗೌಡ ಈಗ ಮುಂಬರುವ ಉಪ ಚುನಾವಣೆಯಲ್ಲಿ ಅವರ ಬೆಂಬಲ ಕೋರಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡು ಶಾಸಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಕೆ.ಆರ್.ಪೇಟೆ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಿಳಿಯುವುದು ಬಹುತೇಕ ಖಚಿತವಾಗಿದೆ.
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ನ ಪ್ರಭಾವಿ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರವನ್ನೇ ನಡೆಸಿದ್ದರು. ಜೆಡಿಎಸ್ ವರಿಷ್ಠರನ್ನು ಓಲೈಸಿಕೊಳ್ಳುವ ಭರದಲ್ಲಿ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಹರಿಹಾಯ್ದು, ಐ.ಟಿ.ರೇಡ್ನ ಬೆದರಿಕೆಯನ್ನೂ ಒಡ್ಡಿ, ವಿವಾದಕ್ಕೆ ಕಾರಣರಾಗಿದ್ದರು. ಆದರೆ ಈಗ ಅದೇ ನಾರಾಯಣಗೌಡರು ಜೆಡಿಎಸ್ ವಿರುದ್ಧವೇ ಮಾತನಾಡುವ ರಾಜಕೀಯ ಅನಿವಾರ್ಯತೆ ಸೃಷ್ಠಿಯಾಗಿದೆ. ಈ ಮಧ್ಯೆ, ಸುಮಲತಾ ಅವರನ್ನು ಭೇಟಿ ಮಾಡಿರುವ ಕೆ.ಸಿ.ನಾರಾಯಣಗೌಡ, ಜೆಡಿಎಸ್ನ ಆಂತರಿಕ ಅಸಹನೆಗಳನ್ನು ಸುಮಲತಾ ಮುಂದೆ ಬಿಚ್ಚಿಟ್ಟಿದ್ದಾಾರೆ. ಮುಂದಿನ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.