ಕೊಲ್ಲೂರು ಮೂಕಾಂಬಿಕಾ ದೇವಾಲಯದ ಮೂರ್ತಿ ಧಾರಕ ವಿವಾದ ಇತ್ಯರ್ಥ
Team Udayavani, Feb 23, 2019, 12:19 AM IST
ಬೆಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ದೇವರ ಮೂರ್ತಿ ಧಾರಕ ವಿಚಾರಕ್ಕೆ ಸಂಬಂಧಿಸಿದಂತೆ ದಶಕದಿಂದ ನಡೆಯುತ್ತಿದ್ದ ವಿವಾದಕ್ಕೆ ತೆರೆ ಎಳೆದಿರುವ ಹೈಕೋರ್ಟ್, 2005ರಲ್ಲಿ ಇದ್ದಂತಹ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಲು ಆದೇಶಿಸಿದೆ. ಅದರಂತೆ, ದೇವಾಲಯದಲ್ಲಿ ಕಾಳಿದಾಸ ಭಟ್ಟರೇ ದೇವರ ಮೂರ್ತಿ ಹೊರುವ ಪದ್ಧತಿ ಮುಂದುವರಿಯಲಿದೆ.
ಕಾಳಿದಾಸ ಭಟ್ಟ ಮತ್ತವರ ಸಹೋದರ ಶ್ರೀಶ ಭಟ್ಟ ಅವರಿಗೆ ತಿಂಗಳಲ್ಲಿ 15 ದಿನ ದೇವರ ಮೂರ್ತಿ ಹೊರಲು ನೀಡಿದ್ದ ಅನುಮತಿ ವಾಪಸ್ ಪಡೆದಿದ್ದ ಮುಜರಾಯಿ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಸಹೋದರರಿಬ್ಬರೂ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯಪೀಠ ಅದನ್ನು ಇತ್ಯರ್ಥಪಡಿಸಿತು. ಅರ್ಜಿ ವಿಚಾರಣೆ ವೇಳೆ, ತಮ್ಮ ಕಿರಿಯ ಸಹೋದರ ಶ್ರೀಶ ಭಟ್ಟ ಅವರಿಗೆ ತಿಂಗಳಲ್ಲಿ 15 ದಿನ ದೇವರ ಮೂರ್ತಿ ಹೊರಲು ಅವಕಾಶ ನೀಡಬೇಕೆಂದು 2005 ಡಿ.23ರಂದು ತಾವು ಸಲ್ಲಿಸಿದ್ದ ಮನವಿ ಯನ್ನು ಹಿಂಪಡೆಯುವುದಾಗಿ ಮೂರ್ತಿ ಕಾಳಿದಾಸ ಭಟ್ಟರು ನ್ಯಾಯಪೀಠಕ್ಕೆ ತಿಳಿಸಿದರು.