ಐಟಿ,ಬಿಟಿಗೆ ನೀಡಿದ ವಿನಾಯ್ತಿ ವಾಪಸ್ ಪಡೆಯಲು ಆಗ್ರಹ
Team Udayavani, Feb 10, 2017, 3:45 AM IST
ವಿಧಾನಸಭೆ: ರಾಜ್ಯ ಸರ್ಕಾರ ಐಟಿ, ಬಿಟಿ ಸೇರಿದಂತೆ ಜ್ಞಾನಾಧಾರಿತ ಉದ್ಯಮಗಳಿಗೆ ನೀಡಿರುವ ವಿನಾಯಿತಿಯನ್ನು ವಾಪಸ್ ಪಡೆಯಬೇಕು ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ಆಗ್ರಹಿಸಿದರು.
ಫೆಬ್ರವರಿ 4 ರಂದು “ಉದಯವಾಣಿ’ ಮಾಡಿರುವ ವರದಿಯನ್ನು ಪ್ರಸ್ತಾಪಿಸಿ ಮಾತನಾಡಿದ ಶೆಟ್ಟರ್, ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಣೆ ಮಾಡಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವುದಾಗಿ ಹೇಳುತ್ತದೆ. ಆದರೆ, 2014ರಲ್ಲಿ ಇದೇ ಸರ್ಕಾರ ಐಟಿ, ಬಿಟಿ ಕಂಪನಿಗಳಿಗೆ ಕಾರ್ಮಿಕ ಕಾಯಿದೆಯಿಂದ ವಿನಾಯಿತಿ ನೀಡಿ ಆದೇಶ ನೀಡಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ವಂಚನೆಯಾಗುತ್ತಿದೆ. ಐಟಿ, ಬಿಟಿ ಕಂಪನಿಗಳು ಏಕಕಾಲಕ್ಕೆ ಎಲ್ಲ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದೇನಿಲ್ಲ. ಹಂತ ಹಂತವಾಗಿಯಾದರೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಅದಕ್ಕೆ ರಾಜ್ಯ ನೀಡಿರುವ ವಿನಾಯಿತಿಯನ್ನು ವಾಪಸ್ ಪಡೆದು ಕನ್ನಡಿಗರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಮುಖ್ಯಮಂತ್ರಿಯವರ ಬೆಂಗಳೂರು ದರ್ಶನ ಹಾಗೂ ಜನತಾ ದರ್ಶನದ ಬಗ್ಗೆ ಪ್ರಸ್ತಾಪಿಸಿದರು. “ಉದಯವಾಣಿ’ ವರದಿ ಪ್ರಸ್ತಾಪಿಸಿ, 15 ತಿಂಗಳಿಂದ ಸಿಎಂ ಅವರು ಜನತಾ ದರ್ಶನವನ್ನೇ ಮಾಡಿಲ್ಲ ಎಂದರೆ, ಇದು ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ದೂರಿದರು.