ಗಲಭೆ ಸೃಷ್ಟಿಸಿ ಅಧಿಕಾರದಿಂದ ಕೆಳಗಿಳಿಸೋದು ಕೈ ಸಂಸ್ಕೃತಿ
Team Udayavani, Dec 25, 2019, 3:04 AM IST
ಚಿಕ್ಕಮಗಳೂರು: ಹೆತ್ತ ತಾಯಿ ಬಗ್ಗೆಯೂ ಅನುಮಾನ ಪಡುವ ಮನಸ್ಥಿತಿಯನ್ನು ಕೆಲವರು ಹೊಂದಿರುತ್ತಾರೆ. ಕಾಂಗ್ರೆಸ್ ಆ ಸ್ಥಿತಿಗೆ ಹೋಗಿರಬಹುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಗಲಭೆಯ ಸಾಚಾತನದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ. ಯಾರಿಗೆ ತನ್ನ ತಾಯಿ ಬಗ್ಗೆ, ದೇಶದ ಸೈನ್ಯದ ಬಗ್ಗೆ ಅನುಮಾನ ಇರುತ್ತದೋ ಅಂತಹವರು ಈ ರೀತಿ ಪ್ರಶ್ನೆ ಮಾಡುತ್ತಿರುತ್ತಾರೆ. ಅವರಿಗೆ ಇದು ಹೊಸತಲ್ಲ.
ಕಾಂಗ್ರೆಸ್ನವರು ಚುನಾವಣೆಯಲ್ಲಿ ಸೋತಾಗಲೆಲ್ಲ ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದರು. ಜಾರ್ಖಂಡ್ನಲ್ಲಿ ಸೋತಿದ್ದನ್ನು ನಾವು ಜನಾದೇಶ ಎಂದು ಒಪ್ಪಿಕೊಂಡಿದ್ದೇವೆ. ಅದೇ ಕಾಂಗ್ರೆಸ್ ಸೋತಿದ್ದರೆ ಇವಿಎಂ ಮೇಲೆ ಆರೋಪಿಸುತ್ತಿತ್ತು. ಹೀಗೆ ಅನುಮಾನಪಡುವ ಪ್ರವೃತ್ತಿ ಕಾಂಗ್ರೆಸ್ಗೆ ಹೊಸತಲ್ಲ ಎಂದರು.
ತಮಗೆ ಬೇಡವಾದವರನ್ನು ಗಲಭೆ ಎಬ್ಬಿಸಿ ಅಧಿಕಾರದಿಂದ ಕೆಳಗಿಳಿಸುವುದು ಕಾಂಗ್ರೆಸ್ ಸಂಸ್ಕೃತಿ. ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಗಲಭೆ ಸೃಷ್ಟಿಸಿಯೇ ಕೆಳಗಿಳಿಸಿದರು. ಆದರೆ ಸಮಾಜದ ಸ್ವಾಸ್ಥ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕಠಿಣ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಹೇಳಿದರು.