ಪಠ್ಯದಲ್ಲಿ ಜಯದೇವಿ ತಾಯಿ ಲಿಗಾಡೆ ಜೀವನ ಚರಿತ್ರೆ ಅಗತ್ಯ: ಸೋಮಶೇಖರ್
Team Udayavani, Jun 23, 2022, 8:39 PM IST
ಬೆಂಗಳೂರು: ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ಡಾ| ಜಯದೇವಿತಾಯಿ ಲಿಗಾಡೆ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಹಮ್ಮಿಕೊಂಡಿದ್ದ ಡಾ| ಜಯದೇವಿ ತಾಯಿ ಲಿಗಾಡೆ ಅವರ 110ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಂತ ಮನೆತನದಲ್ಲಿ ಜನಿಸಿ, ಚಿಕ್ಕವಯಸ್ಸಿನಲ್ಲೇ ವೈಧವ್ಯಕ್ಕೆ ಬಲಿಯಾದರೂ ಧೃತಿಗೆಡದೆ ಕನ್ನಡ ಪರ ಹೋರಾಟ ಮಾಡಿದ್ದರು. ಸ್ವಂತ ಹಣದಿಂದ 400 ಕನ್ನಡ ಶಾಲೆಗಳನ್ನು ತೆರೆದು, ಕನ್ನಡ ಶಿಕ್ಷಕರನ್ನು ನೇಮಕ ಮಾಡಿದ್ದ ಅವರು ಸಾಹಿತ್ಯದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು ಎಂದರು.
ದೂರದರ್ಶನ ಮತ್ತು ಆಕಾಶವಾಣಿ ನಿರ್ದೇಶಕಿ ಡಾ| ನಿರ್ಮಲಾ ಎಲಿಗಾರ್ ಅವರು ಡಾ| ಜಯದೇವಿ ತಾಯಿ ಅವರ ಕನ್ನಡ ಪರ ಹೋರಾಟದ ಬಗ್ಗೆ ಉಪನ್ಯಾಸ ನೀಡಿದರು. ಜಯದೇವಿ ಅವರ ಸೊಸೆ ಡಾ| ಮಧುಮಾಲಾ ಅವರು ಲಿಗಾಡೆಯ ನಡೆ-ನುಡಿ, ಸಾಧನೆ, ಆದರ್ಶಗಳನ್ನು ಸ್ಮರಿಸಿಕೊಂಡರು.
ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.