ಎಚ್ಡಿಕೆಗೆ ತಡೆ; ರಾಜಭವನದ ಎದುರು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ
Team Udayavani, May 16, 2018, 5:31 PM IST
ಬೆಂಗಳೂರು: ರಾಜ್ಯಪಾಲರ ಎದುರು ಜೆಡಿಎಸ್ ಶಾಸಕರ ಪರೇಡ್ ನಡೆಸಲು ಮುಂದಾದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಭವನ ಪ್ರವೇಶಿಸಲು ತಡೆ ಹಿಡಿದ ಕಾರಣಕ್ಕಾಗಿ ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವಿದ್ಯಮಾನ ಬುಧವಾರ ಮಧ್ಯಾಹ್ನ ನಡೆದಿದೆ.
ಎಚ್ಡಿಕೆ ಅವರು 5 ಗಂಟೆಗೆ ಸಮಯ ನಿಗದಿ ಮಾಡಿದ್ದರು, ಆದರೆ ಅವರು ಅವಧಿಗಿಂತ ಬೇಗ ಶಾಸಕರೊಂದಿಗೆ ಆಗಮಿಸಿದ್ದು ಭದ್ರತಾ ಸಿಬಂದಿ ತಡೆದಿದ್ದಾರೆ. ಈ ವೇಳೆ ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರು ಧರಣಿಯನ್ನೂ ನಡೆಸಿದರು. 5 ಗಂಟೆಯ ಬಳಿಕ ಕುಮಾರಸ್ವಾಮಿ ಅವರನ್ನು ಒಳ ಬಿಡಲಾಯಿತು.
ತಲಾ 10 ಮಂದಿಗೆ ಮಾತ್ರ ಅವಕಾಶ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರ ನಿಯೋಗ , ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗದ ತಲಾ 10 ಮಂದಿಗೆ ಮಾತ್ರ ರಾಜ್ಯಪಾಲರ ಭೇಟಿಗೆ ಅವಕಾಶ ನೀಡಲಾಗಿದೆ. ಉಳಿದ ಶಾಸಕರೆಲ್ಲರೂ ಗೇಟ್ ಬಳಿಯೇ ನಿಂತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ರಾಜ್ಯಪಾಲ ವಜುಭಾಯಿವಾಲಾ ಅವರ ಎದುರು ಪರೇಡ್ ನಡೆಸಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ. ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯ ಪಾಲರಿಗೆ ಇದೇ ವೇಳೆ ನೀಡಲಿದ್ದಾರೆ.
ಈಗ ರಾಜ್ಯಪಾಲರು ಸರ್ಕಾರ ರಚಿಸಲು ಯಾರಿಗೆ ಕರೆ ನೀಡುತ್ತಾರೆ ಎನ್ನುವ ಕುತೂಹಲ ಎಲ್ಲರದ್ದು.