ಕೈ ಕೊಡುವ ಶಾಸಕರ ಬಗ್ಗೆ ಜೆಡಿಎಸ್ ನಿಗಾ
Team Udayavani, Jul 14, 2019, 3:00 AM IST
ಬೆಂಗಳೂರು: ಒಂದೆಡೆ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ “ಮ್ಯಾಜಿಕ್ ನಂಬರ್’ ಸೆಟ್ ಮಾಡಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಕಸರತ್ತು ನಡೆಸುತ್ತಿದ್ದರೆ, ಮತ್ತೂಂದೆಡೆ ಬಿಜೆಪಿಯತ್ತ ಹೋಗುವ ಬಗ್ಗೆ ಅನುಮಾನ ಇರುವ ಶಾಸಕರನ್ನು ಜೆಡಿಎಸ್ನ ಸಚಿವರು ಕಾಯುತ್ತಿದ್ದಾರೆ.
ಇನ್ನೂ ನಾಲ್ಕೈದು ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ನೋಡ್ತಾ ಇರಿ ಎಂದು ಬಿಜೆಪಿ ನಾಯಕರು ಹೇಳಿರುವುದರಿಂದ ಕೈ ಕೊಡುವ ಶಾಸಕರ ಬಗ್ಗೆ ನಿಗಾ ಇಡಲಾಗಿದೆ. ಜೆಡಿಎಸ್ ಶಾಸಕರನ್ನು ದೇವನಹಳ್ಳಿ ಬಳಿಯ ಪ್ರಸ್ಟೀಜ್ ಗಾಲ್ಫ್ ರೆಸಾರ್ಟ್ನಲ್ಲಿ ಉಳಿಸಿದ್ದರೂ ಕೆಲವರ ಮೇಲೆ ಕಣ್ಣಿಡಲಾಗಿದೆ. ಇದಕ್ಕಾಗಿ ಸಚಿವ ಸಾ.ರಾ.ಮಹೇಶ್, ಪುಟ್ಟರಾಜು ಹಾಗೂ ಕೆಲವು ವಿಧಾನಪರಿಷತ್ ಸದಸ್ಯರನ್ನು ನಿಯೋಜಿಸಲಾಗಿದೆ.
ಸಿರಾ ಸತ್ಯನಾರಾಯಣ, ಕೆ.ಶ್ರೀನಿವಾಸಗೌಡ , ಲಿಂಗೇಶ್ಕುಮಾರ್ ಸೇರಿ ಕೆಲವರನ್ನು ಬಿಜೆಪಿಯವರು ಸಂಪರ್ಕಿಸುವ ಸಾಧ್ಯತೆ ಇರುವ ಕಾರಣ ಅವರು ಬಿಜೆಪಿ ನಾಯಕರ ಕೈಗೆ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ರೆಸಾರ್ಟ್ನಲ್ಲಿರುವ ಜೆಡಿಎಸ್ ಶಾಸಕರ ಜತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದಾರೆ. ಆಗಾಗ ಅಲ್ಲಿಗೆ ಹೋಗಿ, ಜತೆಯಲ್ಲೇ ಊಟ ಮಾಡಿ, “ಸರ್ಕಾರ ಉಳಿಯಲಿದೆ. ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಯಾರೂ ಆತಂಕ ಪಡಬಾರದು’ ಎಂದು ಧೈರ್ಯ ತುಂಬಿ ಬರುತ್ತಿದ್ದಾರೆ.