ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಜೀವನ ಚೈತ್ರಯಾತ್ರೆ
Team Udayavani, Mar 6, 2020, 3:02 AM IST
“ದೇಶ ಸುತ್ತು ಕೋಶ ಓದು’ ಎಂಬ ನಾಣ್ನುಡಿ ಯಂತೆ ಸರ್ಕಾರ ಹಿರಿಯ ನಾಗರಿಕರಿಗಾಗಿ ದೇಶ ಸುತ್ತುವುದರ ಜತೆಗೆ ಸುಪ್ರಸಿದ್ಧ ತೀರ್ಥ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಲು “ಜೀವನ ಚೈತ್ರಯಾತ್ರೆ’ ಯೋಜನೆ ರೂಪಿಸಿದೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ರೈಲ್ವೆ ಇಲಾಖೆಯ ಐಆರ್ಸಿಟಿಸಿ ಸಹಯೋಗದೊಂದಿಗೆ 60 ವರ್ಷ ಮೀರಿದ ಬಡತನ ರೇಖೆ ಕೆಳಗಿರುವ ಆಯ್ದ ಫಲಾನು ಭವಿಗಳು ಉಚಿತವಾಗಿ ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳ ದರ್ಶನ ಪಡೆಯಲು ಈ ಯೋಜನೆ ರೂಪಿಸಿ, 20 ಕೋಟಿ ರೂ. ಬಜೆಟ್ನಲ್ಲಿ ಸರ್ಕಾರ ಮೀಸಲಿರಿಸಿದೆ.
ಶ್ರೀ ಕ್ಷೇತ್ರ ಮಂತ್ರಾಲಯ, ತುಳಜಾಪುರ, ಪಂಢರಾಪುರ, ವಾರಣಾಸಿ, ಉಜ್ಜಯಿನಿ, ಶ್ರೀ ಶೈಲ ದೇವಾಲಯಗಳಲ್ಲಿರುವ ಅತಿಥಿ ಗೃಹಗಳ ಮೂಲಭೂತ ಸೌಕರ್ಯಗಳ ಅಭಿವೃದಿಗೆ ಸರ್ಕಾರ 25 ಕೋಟಿ ರೂ.ಮೀಸಲಿರಿಸಿದೆ.
ಸಂರಕ್ಷಣಾ ಯೋಜನೆ: ರಾಜ್ಯದಲ್ಲಿ 25,000ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು ಹಾಗೂ ಸ್ಮಾರಕಗಳಿದ್ದು ಇವುಗಳನ್ನು ಹಂತ-ಹಂತವಾಗಿ ಸಂರಕ್ಷಿಸಿ ಪುನರುಜ್ಜೀವನಗೊಳಿಸಲು “ಸಂರಕ್ಷಣಾ’ಯೋಜನೆ ಜಾರಿಗೆ ತರುವಲ ಸಂಕಲ್ಪ ಮಾಡಿದೆ.