ಸೋಮವಾರ ಜಿಂದಾಲ್ ಸಂಪುಟ ಉಪ ಸಮಿತಿ ಸಭೆ
Team Udayavani, Jul 4, 2019, 3:04 AM IST
ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ವಿಚಾರ ಕುರಿತು ರಚನೆಯಾಗಿರುವ ಸಂಪುಟ ಉಪ ಸಮಿತಿಯ ಮೊದಲ ಸಭೆಯನ್ನು ಜುಲೈ 8ರ ಸೋಮವಾರ ಕರೆಯಲಾಗಿದೆ ಎಂದು ಸಂಪುಟ ಉಪ ಸಮಿತಿ ಅಧ್ಯಕ್ಷ, ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಜಿಂದಾಲ್ಗೆ ಜಮೀನು ಮಾರಾಟ ಮಾಡುವ ವಿಚಾರವಾಗಿ ವಿಜಯನಗರ ಶಾಸಕ ಆನಂದ್ ಸಿಂಗ್ ವಿಸ್ತೃತವಾಗಿ ಪತ್ರ ಬರೆದಿದ್ದರು. ಪ್ರತ್ಯೇಕವಾಗಿ ಭೇಟಿ ಮಾಡಿಲ್ಲ. ಸೋಮವಾರದ ಸಭೆಯಲ್ಲಿ ಎಚ್.ಕೆ. ಪಾಟೀಲ್ ಹಾಗೂ ಆನಂದ್ ಸಿಂಗ್ ಬರೆದ ಪತ್ರಗಳ ಬಗ್ಗೆ ಚರ್ಚೆ ಮಾಡುತ್ತೇವೆ.
ಈ ವಿಷಯದಲ್ಲಿ ಆಳವಾಗಿ ಅಧ್ಯಯನ ಮಾಡಿ ವರದಿ ನೀಡುತ್ತೇವೆ. ಎಚ್.ಕೆ. ಪಾಟೀಲ್, ಆನಂದ್ ಸಿಂಗ್ ಅವರನ್ನೂ ಆಹ್ವಾನಿಸಿ ವಾದ ಕೇಳುತ್ತೇವೆ. ಅಗತ್ಯ ಬಿದ್ದರೆ, ಜಿಂದಾಲ್ ಸಂಸ್ಥೆಯವರನ್ನೂ ಕರೆಯುತ್ತೇವೆ ಎಂದು ಹೇಳಿದರು.
ಇದೇ ವೇಳೆ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ನೀಡಲು ಒಂದು ಪದ್ಧತಿ ಇದೆ. ನಿಯಮಾನುಸಾರವಾಗಿಯೇ ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ಎಲ್ಲಿಯೋ ಕುಳಿತು ರಾಜೀನಾಮೆ ನೀಡಿದರೆ ಆಗುವುದಿಲ್ಲ ಎಂದರು.