ಜೋಡೆತ್ತು ಬರುತ್ತಿವೆ ಮೆರವಣಿಗೆ ಮಾಡಿ
Team Udayavani, Jun 8, 2019, 3:04 AM IST
ಮಂಡ್ಯ: ಬಣ್ಣದ ಮಾತುಗಳಿಗೆ ಮರುಳಾಗಿ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ, ಅವರ (ಸುಮಲತಾ) ಪರ ಕೃತಜ್ಞತೆ ಸಲ್ಲಿಸಲು ಜೋಡೆತ್ತುಗಳು (ಹೋರಿಗಳು) ಬರುತ್ತಿವೆ. ಅವುಗಳನ್ನು ಮೆರವಣಿಗೆ ಮಾಡಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪರೋಕ್ಷವಾಗಿ ಚಿತ್ರನಟ ದರ್ಶನ್ ಮತ್ತು ಯಶ್ಗೆ ಟಾಂಗ್ ನೀಡಿದರು.
ನಗರದಲ್ಲಿ ಮಾತನಾಡಿ, ಸುಮಲತಾ ಪರ ಚುನಾವಣೆಯಲ್ಲಿ ಪ್ರಚಾರಕ್ಕಿಳಿದಿದ್ದ ಜೋಡೆತ್ತುಗಳ ಮಾತಿಗೆ ಮರುಳಾಗಿ ಸುಮಲತಾರನ್ನು ಗೆಲ್ಲಿಸಿದ್ದೀರಿ. ಈಗ ಜೋಡೆತ್ತುಗಳು ಬರುತ್ತಿವೆ. ಅವರನ್ನು ಮೆರವಣಿಗೆ ಮಾಡಿ ಖುಷಿ ಪಡಿ ಎಂದು ಲಘುವಾಗಿ ಮಾತನಾಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ಮೂಲ ಸೌಲಭ್ಯ ಕೇಳಿದ್ದಕ್ಕೆ ಆಕ್ರೋಶ: ಇದೇ ವೇಳೆ, ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಕಾಲೋನಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ ಜನರ ವಿರುದ್ಧವೇ ತಿರುಗಿ ಬಿದ್ದ ಸಚಿವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಓಟು ಕೊಟ್ಟಿದ್ದೀರಿ.
ಅಭಿವೃದ್ಧಿಗೆ ನಾವು ಬೇಕು, ಓಟು ನೀಡಲು ಅವರು ಬೇಕಾ ಎಂದು ತಿರುಗೇಟು ನೀಡಿದರು. ಮರ್ಯಾದೆ ಇದ್ದರೆ ಮಾತನಾಡಿ, ಇಲ್ಲವೇ ಭಿಕ್ಷೆ ಬೇಡಿ ಅಭಿವೃದ್ಧಿಪಡಿಸಿಕೊಳ್ಳಿ ಎಂದು ಅವಾಜ್ ಹಾಕಿ ಸ್ಥಳದಿಂದ ತೆರಳಿದರು.