ದಿಲೀಪ್ ಕುಮಾರ್ “ತಮ್ಮದೇ ಜೀವಿತ ಕಾಲದ ದಂತಕತೆ” : ವಿಶ್ವೇಶ್ವರ ಹೆಗಡೆ ಕಾಗೇರಿ
Team Udayavani, Jul 7, 2021, 1:39 PM IST
ಬೆಂಗಳೂರು : ಇಂದು ನಿಧನ ಹೊಂದಿದ ಹಿಂದಿ ಚಿತ್ರರಂಗದ ಮೇರು ನಟ, ಬಹುಮುಖಿ ವ್ಯಕ್ತಿತ್ವದ ದಿಲೀಪ್ ಕುಮಾರ್ ಅವರು ತಮ್ಮದೇ ಜೀವಿತ ಕಾಲದ ದಂತಕತೆಯಾಗಿದ್ದರು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸಂತಾಪ ಸಂದೇಶದಲ್ಲಿ ಅವರು, ದಿಲೀಪ್ ಕುಮಾರ್ ಅವರು ತಮ್ಮ ವೃತ್ತಿಜೀವನದಲ್ಲಿ ಯಾವುದೇ ಪಾತ್ರಕ್ಕೆ ನಿರಾಯಾಸವಾಗಿ ಜೀವತುಂಬುತ್ತಿದ್ದ ಅದ್ಭುತ ನಟರಾಗಿದ್ದರು ಎಂದು ಹೇಳಿದ್ದಾರೆ. “ದಿಲೀಪ್ ಕುಮಾರ್ ಅವರ ನಿಧನದಿಂದ, ಅದ್ಭುತ ಯುಗಾಂತ್ಯವಾಗಿದೆ” ಎಂದು ಸ್ಪೀಕರ್ ಹೇಳಿದ್ದಾರೆ.
ದಿಲೀಪ್ ಕುಮಾರ್ ಅವರು ಯಾವೇದೇ ಪಾತ್ರಕ್ಕೆ ಹೊಂದಿಕೊಳ್ಳುತ್ತಿದ್ದರು. ಆ ಪಾತ್ರದಲ್ಲಿ ಲೀನವಾಗುತ್ತಿದ್ದರು. ಆ ಅದ್ಭುತ ನಟನೆಯಿಂದಲೇ ಅವರು ತಲೆಮಾರುಗಳ ಪ್ರೇಕ್ಷಕರ, ಚಿತ್ರರಸಿಕರ ಹೃದಯದಲ್ಲಿ ನೆಲೆಸಿದ್ದಾರೆ. ಅವರ ನಟನಾ ಕೌಶಲ್ಯ, ಚೈತನ್ಯ ಮತ್ತು ಉತ್ಸುಕತೆಯಿಂದ ಕೂಡಿರುತ್ತಿತ್ತು, ಅವರು ಜನ ಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜನರು ದಿಲೀಪ್ ಕುಮಾರ್ ಅವರ ಬಗ್ಗೆ ಅಪಾರವಾದ ಮಮಕಾರ ಹೊಂದಿದ್ದರು.
ಪ್ರತಿಯೊಬ್ಬರ ಮನೆಯಲ್ಲೂ ಅವರ ಬಗ್ಗೆ, ಅವರ ಚಿತ್ರಗಳ ಬಗ್ಗೆ ಮತ್ತು ನಟನೆಯ ಬಗ್ಗೆ ಮಾತನಾಡಲಾಗುತ್ತಿತ್ತು. ರಜತ ಪರದೆಯಲ್ಲಿನ ಅವರ ಅಭಿನಯ ವಿದೇಶೀಯರೂ ಭಾರತೀಯ ಚಲನಚಿತ್ರ ವೀಕ್ಷಿಸುವಂತೆ ಮಾಡಿತ್ತು. ಸುದೀರ್ಘ ಕಾಲ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗೆ ಆ ಕ್ಷೇತ್ರದ ಪರಮೋಚ್ಚ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೂ ಅವರು ಭಾಜನರಾಗಿದ್ದರು ಎಂದೂ ಸ್ಪೀಕರ್ ತಿಳಿಸಿದ್ದಾರೆ. ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.