ಎಚ್ಚೆಸ್ವಿ ಕಣ್ಣಾಳದಲ್ಲಿ ಕಲಬುರಗಿ ಬಿಂಬಗಳು
Team Udayavani, Feb 6, 2020, 3:05 AM IST
85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಅವರು ತಮ್ಮ ಸುದೀರ್ಘ ಅಧ್ಯಕ್ಷೀಯ ಭಾಷಣದಲ್ಲಿ ಕಲಬುರಗಿಯನ್ನು ನೆನೆಯಲು ಮರೆಯಲಿಲ್ಲ. ಸೂಫಿ-ಶರಣರ ನೆಲದ ಕುರಿತು ಅವರು ಆಡಿದ ಕೆಲವು ಮಾತುಗಳು ಇಲ್ಲಿವೆ.
* ಭಾಷಾವಾರು ಪ್ರಾಂತ್ಯ ಪ್ರಾಪ್ತಿಗಾಗಿ ಎಂತೆಂತ ಆತ್ಮಬಲಿಗಳು ನಡೆದವು, ನಿಸ್ವಾರ್ಥ ಹೋರಾಟಗಳು ನಡೆದವು. ನಾವೀಗ ನೆನೆಯಬೇಕಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಬಳ್ಳಾರಿಯ ರಂಜಾನ್ಸಾಬ್ ಆತ್ಮತ್ಯಾಗ ಮಾಡಿಕೊಂಡರು-ತೆಲುಗು ಏಕೀಕರಣಕ್ಕಾಗಿ ಪೊಟ್ಟಿ ಶ್ರೀರಾಮುಲು ಆತ್ಮಾರ್ಪಣೆ ಮಾಡಿಕೊಂಡಂತೆ. ಕರ್ನಾಟಕದಲ್ಲಿ ವಿಲೀನಿಕರಣಗೊಳ್ಳಲು ಈ ಕಲ್ಯಾಣ ಕರ್ನಾಟಕವು ನಡೆಸಿದ ಹೋರಾಟವೇನು ಸಾಮಾನ್ಯವಾದುದೆ?
* ಕಲಬುರಗಿ ಪ್ರಾಂತ್ಯವು ಕನ್ನಡ ಸಾಹಿತ್ಯದ ಉಗಮಸ್ಥಳ ಎಂದು ಇತಿಹಾಸ ಬಲ್ಲವರೆಲ್ಲರಿಗೂ ಗೊತ್ತು. ಕನ್ನಡ ಭಾಷೆಯ ಪ್ರಥಮ ಕೃತಿ ಕವಿರಾಜಮಾರ್ಗ ಸೃಷ್ಟಿಯಾದದ್ದು ಕಲಬುರಗಿ ಪ್ರಾಂತ್ಯದಲ್ಲಿ. ಕ್ರಿಸ್ತಶಕ ಎಂಟರಿಂದ ಹತ್ತನೇ ಶತಮಾನದವರೆಗೆ ಕರ್ನಾಟಕವನ್ನು ಆಳಿದ ರಾಷ್ಟ್ರಕೂಟರಿಗೆ ಮಳಖೇಡ ರಾಜಧಾನಿಯಾಗಿತ್ತು. ಕವಿರಾಜಮಾರ್ಗದ ಕತೃì ಶ್ರೀವಿಜಯ ರಾಷ್ಟ್ರಕೂಟ ದೊರೆ ನೃಪತುಂಗನ ಆಸ್ಥಾನ ಕವಿ.
* ಕವಿವರ್ಯ ಬೇಂದ್ರೆಯವರು ಹೇಳುವಂತೆ ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಬೀಡು ಕಲ್ಯಾಣ ಕರ್ನಾಟಕ. ದೇವರದಾಸಿಮಯ್ಯ-ಆತನ ಪತ್ನಿ ದುಗ್ಗಲೆ, ಕೆಂಭಾ ಭೋಗಣ್ಣ, ಏಕಾಂತದರಾಮಯ್ಯ, ಕೋಲೂರು ಶಾಂತಯ್ಯ, ಷಣ್ಮುಖಸ್ವಾಮಿ ಮೊದಲಾದ ಮಹನೀಯರು ಈ ಪ್ರಾಂತ್ಯಕ್ಕೆ ಸೇರಿದವರು. ಸಮೀಪದಲ್ಲಿರುವ ದೇವನೂರು ಕವಿ ಲಕ್ಷ್ಮೀಶನ ಜನ್ಮಸ್ಥಳವೆಂದು ಈಗಲೂ ಅನೇಕ ವಿದ್ವಾಂಸರು ಅಭಿಪ್ರಾಯಪಡುವರು.
* ದಾಸ ಸಾಹಿತ್ಯಕ್ಕೂ ಕಲಬುರಗಿಯ ಕೊಡುಗೆ ಅಸಾಮಾನ್ಯವಾದುದೇ. ಸುರಪುರದ ಆನಂದದಾಸ, ಮಣ್ಣೂರ ದಾಸ, ನಾಯಕಲ್ ರಾಮಾಚಾರ್ಯ-ಹೀಗೆ ಅನೇಕರನ್ನು ನಾವೀಗ ನೆನೆಯಬೇಕಾಗಿದೆ.
* ನಿಜಾಮರ ದಬ್ಟಾಳಿಕೆ, ಅದರಲ್ಲೂ ರಜಾಕಾರರ ಉಗ್ರಗಾಮಿ ಹಾವಳಿಗಳಿಂದ ಕನ್ನಡಿಗರು ಆಗ ಗಡಿಶಿಬಿರಗಳನ್ನು ಸ್ಥಾಪಿಸಿಕೊಂಡು ಹೋರಾಡಬೇಕಾಯಿತು. ಮತಾಂಧರಾದ ರಜಾಕಾರರ ಸಂಘಟನೆ ನಿಜಾಮರ ಸೈನ್ಯ ಮತ್ತು ಪೊಲೀಸಿಗಿಂತ ನಾಲ್ಕು ಪಟ್ಟು ಹೆಚ್ಚು ಇತ್ತು. ಅಂಥ ಸಂದರ್ಭದಲ್ಲಿ ಅಸ್ಮಿತೆಯ ರಕ್ಷಣೆಗಾಗಿ ಹುಟ್ಟಿಕೊಂಡವು ಗಡಿಶಿಬಿರಗಳು. ಇಂಥ ಆತ್ಮಜಾಗರಣೆಯ ಶಿಬಿರಗಳು, ಕನ್ನಡವನ್ನು ಉಳಿಸಿ ಬೆಳೆಸಲು ಶಿಕ್ಷಣ ವಲಯದಲ್ಲಿ ನಡೆದ ಮಹತ್ವದ ಪ್ರಯೋಗಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ದೇಶಪೇಮ, ಭಾಷಾಪ್ರೀತಿ ಮತ್ತು ರಾಜಕೀಯ ಎಚ್ಚರಗಳು ಈ ಪ್ರಾಂತ್ಯದಲ್ಲಿ ಅನೇಕ ರಾಷ್ಟ್ರಪುರುಷರ, ರಾಜಕೀಯ ಮುತ್ಸದ್ದಿಗಳ ಹುಟ್ಟಿಗೆ ಕಾರಣವಾಗಿವೆ.
ಮೊಬೈಲೊಳಗೆ “ಐಕ್ಯ’ರಾದರು!: ಸಮ್ಮೇಳನ ವೇದಿಕೆಯ ಸನಿಹದಲ್ಲಿಯೇ ಐಕ್ಯಮಂಟಪ ನಿರ್ಮಿಸಲಾಗಿತ್ತು. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನ ಇದನ್ನು ವಿಶ್ರಾಂತಿ ತಾಣವನ್ನಾಗಿ, ಸೆಲ್ಫಿ ಪಾಯಿಂಟ್ ಆಗಿ ಮಾರ್ಪಡಿಸಿಕೊಂಡರು. ಮತ್ತೆ ಅನೇಕರು, ಇಲ್ಲಿ ಮೊಬೈಲ್ನಲ್ಲಿ ಮೊಳಗಿರುವ ದೃಶ್ಯ ಕಂಡುಬಂದಿತ್ತು. ಮೊಬೈಲ್ ಒಳಗೆ ಐಕ್ಯರಾಗುವ ಈಗಿನ ಯುವಜನತೆಯ ಮುಂದೆ ಐಕ್ಯಮಂಟಪ ಬೇರೆಯದ್ದೇ ಧ್ವನಿ ಹೊಮ್ಮಿಸುತ್ತಿತ್ತು.
ಕುರಿ, ಶೈನ್…ಹೌದು ಸ್ವಾಮಿ!: ಪಂಪ, ರನ್ನ, ಕುವೆಂಪು, ಬೇಂದ್ರೆಯ ಹೆಸರು ಮೊಳಗಿದ ಜಾಗದಲ್ಲಿ ಕುರಿ ಪ್ರತಾಪ್, ಶೈನ್ ಶೆಟ್ಟಿಯ ಹೆಸರುಗಳೂ ಮೊಳಗಿದ ದೃಶ್ಯ ಕಂಡುಬಂತು. ಬಿಗ್ಬಾಸ್ ಮುಗಿದು ಮೂರ್ನಾಲ್ಕು ದಿನಗಳೇ ಆದರೂ, ಆ ಕುರಿತು ಚರ್ಚೆಗಳು ನಿಂತಿರಲಿಲ್ಲ. ಕುರಿ ಪ್ರತಾಪ್ ಗೆಲ್ಲಬೇಕಿತ್ತು. ಎಲ್ಲ ಸೇರಿ ಮೋಸ ಮಾಡಿದ್ರು ಎನ್ನುವ ಮಾತುಗಳು, ಕೆಲವು ಯುವಕರ ಚರ್ಚೆಗೆ ಕಾರಣವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ