ಕಲಾಪದಲ್ಲಿ ಕೋಲಾಹಲ ಎಬ್ಬಿಸಿದ ರೈ ಪ್ರಕರಣ, ರಾಜೀನಾಮೆಗೆ ಬಿಜೆಪಿ ಪಟ್ಟು
Team Udayavani, Jun 19, 2017, 1:15 PM IST
ಬೆಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಒಬ್ಬ ಪುಕ್ಕಲ. ಅವನನ್ನು ಅರೆಸ್ಟ್ ಮಾಡಿದರೆ ಯಾರೂ ಏನೂ ಮಾಡುವುದಿಲ್ಲ. ನೀವು ಅವನ ಮೇಲೆ ಕ್ರಿಮಿನಲ್ ಕೇಸ್ ಮಾಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ಅವರಿಗೆ ಸಚಿವ ರಮಾನಾಥ ರೈ ಹುಕುಂ ಕೊಡುತ್ತಿರುವ ವಿಡಿಯೋ(ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ್ ಭಟ್ ಪುಕ್ಕಲ, ಅರೆಸ್ಟ್ ಮಾಡಿದ್ರೆ ಏನೂ ಆಗಲ್ಲ!) ಪ್ರಕರಣ ಸೋಮವಾರ ವಿಧಾನಸಭೆಯ ಕಲಾಪದಲ್ಲೂ ಪ್ರತಿಧ್ವನಿಸುವ ಮೂಲಕ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಹೇಳಿರುವ ಸಚಿವ ರಮಾನಾಥ ರೈ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎದ್ದು ನಿಂತು ಮಾತನಾಡಿದ ಸಚಿವ ರೈ, ನಮ್ಮ ಜಿಲ್ಲೆಯಲ್ಲಿ ಜಲೀಲ್ ಎಂಬವನ ಕೊಠಡಿಗೆ ನುಗ್ಗಿ ಹಾಡಹಗಲೇ ಕೊಚ್ಚಿ ಕೊಲೆಗೈಯಲಾಗಿತ್ತು. ಇದರಲ್ಲಿ ಸಂಘ ಪರಿವಾರದವರು ಇದ್ದಾರೆ. ಗಲಾಟೆಗೆ ಸಂಘ ಪರಿವಾರದವರೇ ಕಾರಣ ಎಂದು ಹೇಳುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೋಲಾಹಲ ಎಬ್ಬಿಸಿದರು.
ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯುತ್ತಿದ್ದಂತೆಯೇ ಸ್ಪೀಕರ್ ಕೆಬಿ ಕೋಳಿವಾಡ ಅವರು ಎದ್ದು ನಿಂತು ಗದ್ದಲ ಎಬ್ಬಿಸದಂತೆ ಮನವಿ ಮಾಡಿದರು. ಆದರೆ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ರಾಜೀನಾಮೆ ಕೊಡುವಂತೆ ಪಟ್ಟು ಹಿಡಿದು ಒತ್ತಾಯಿಸಿದರು.
ಜಗದೀಶ್ ಶೆಟ್ಟರ್ ಅವರು ವಿಷಯ ಪ್ರಸ್ತಾಪಿಸಿ, ಪ್ರಭಾಕರ್ ಭಟ್ ಅವರನ್ನು ಬಂಧಿಸಿ ಎಂದು ಹೇಳಲು ರಮಾನಾಥ ರೈ ಯಾರು ಎಂದು ಪ್ರಶ್ನಿಸಿದರು.