ಗೌರ್ನರ್ ನಡೆ, ಬಿಎಸ್ವೈ ಪ್ರಮಾಣವಚನ, ಕಾನೂನು ಜಿಜ್ಞಾಸೆ
Team Udayavani, Jul 27, 2019, 5:00 AM IST
ಬೆಂಗಳೂರು: ರಾಜ್ಯ ರಾಜಕಾರಣದ ಸದ್ಯದ ಬೆಳವಣಿಗೆ ಗಳು ಸಾಕಷ್ಟು ಕಾನೂನು ‘ಜಿಜ್ಞಾಸೆ’ ಮೂಡಿಸಿದ್ದು, ಮುಂದೆ ಇದು ನ್ಯಾಯಾಂಗದ ‘ಅಂಗಳ’ ತಲುಪುವ ಲಕ್ಷಣಗಳು ನಿಚ್ಚಳವಾಗಿವೆ. ತಕ್ಷಣಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಬಹುಮತವನ್ನೂ ಸಾಬೀತುಪಡಿಸ ಬಹುದು. ಆದರೆ, ಮುಂದಿನ ದಿನಗಳಲ್ಲಿ ಕಾನೂನು ಅಡೆ ತಡೆಗಳು ಎದುರಾಗಲೂಬಹುದು.
ಈ ಮಧ್ಯೆ, ಮೂವರು ಶಾಸಕರ ಅನರ್ಹತೆ, 13 ಮಂದಿ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗ ಸದನದ ಒಟ್ಟು ಸಂಖ್ಯಾಬಲದ ಪ್ರಕಾರ ಬಹುಮತಕ್ಕೆ ಬೇಕಾದ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವಾಗ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ನಡೆಯ ಬಗ್ಗೆಯೂ ವಿಭಿನ್ನ ಕಾನೂನು ವಿಶ್ಲೇಷಣೆಗಳು ಮೂಡಿ ಬರುತ್ತಿವೆ.
ಸದನದ ಸದ್ಯದ ಸಂಖ್ಯಾಬಲದ ಆಧಾರದಲ್ಲಿ ಸರ್ಕಾರ ರಚನೆಗೆ ಯಡಿಯೂರಪ್ಪನವರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ರಾಜ್ಯಪಾಲರು ಒಪ್ಪಿಗೆ ಕೊಟ್ಟಿರುವುದು ಕಾನೂನು ರೀತಿ ಸಮ್ಮತವಾಗಿದೆ ಎಂದು ಕೆಲವು ಕಾನೂನು ತಜ್ಞರು ಹೇಳಿದರೆ, ರಾಜ್ಯಪಾಲರ ಈ ನಡೆ ಸಂವಿಧಾನ ಮತ್ತು ಕಾನೂನು ಬಾಹಿರ. ಇದು ನ್ಯಾಯಾ ಲಯದಲ್ಲಿ ಪ್ರಶ್ನಿಸಲೇಬೇಕಾದ ಮತ್ತು ನ್ಯಾಯಾಂಗ ಮಧ್ಯಪ್ರವೇಶಿಸಲು ಅರ್ಹ ಪ್ರಕರಣವಾಗಿದೆ ಎಂದು ಕೆಲ ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೂ ಬಹುಮತ ಸಾಬೀತುಪಡಿಸುವುದು ಯಡಿ ಯೂರಪ್ಪನವರಿಗೆ ಸದ್ಯದ ಮಟ್ಟಿಗೆ ಒಂದು ಸವಾಲು ಆಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಮೂವರು ಶಾಸಕರು ಅನರ್ಹಗೊಂಡಿದ್ದಾರೆ. 13 ಮಂದಿ ಶಾಸಕರ ಭವಿಷ್ಯ ಸದ್ಯ ಸ್ಪೀಕರ್ ಕೈಯಲ್ಲಿದೆ. ಒಂದೊಮ್ಮೆ ಈ ಎಲ್ಲ 13 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರೆ ಎಲ್ಲರೂ ಕಾನೂನು ಹೋರಾಟಕ್ಕೆ ಮುಂದಾಗುವುದು ಖಚಿತ. ಅತೃಪ್ತ ಶಾಸಕರು ಸಲ್ಲಿಸಿದ ಅರ್ಜಿಯು ವಿಸ್ತೃತ ವಿಚಾರಣೆಗೆ ಸುಪ್ರೀಂಕೋರ್ಟ್ ಮುಂದಿದೆ. ಹೀಗಾಗಿ, ಒಂದಿಷ್ಟು ಕಾನೂನು ತೊಡಕುಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುಂತಿಲ್ಲ.
ರಾಜ್ಯಪಾಲರ ಕ್ರಮ ಸರಿ: ರಾಜೀನಾಮೆ ಕೊಟ್ಟಿರುವ 13 ಮಂದಿ ಶಾಸಕರು ವಾಪಸ್ ಬರುವ ಅಥವಾ ರಾಜೀನಾಮೆ ಹಿಂದಕ್ಕೆ ಪಡೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಿರುವಾಗ ಅವರು ಸದನಕ್ಕೆ ಬರುವ ಸಾಧ್ಯತೆಗಳೂ ಇಲ್ಲ. ಅದರಂತೆ ಎಚ್.ಡಿ. ಕುಮಾರ ಸ್ವಾಮಿಯವರು ವಿಶ್ವಾಸಮತ ಯಾಚನೆ ವೇಳೆ ಇದ್ದ ಸಂಖ್ಯಾಬಲ ಈಗಲೂ ಅನ್ವಯವಾಗುತ್ತದೆ. ಹಾಗಾಗಿ, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ ಹಾಗೂ ಆ ಮೂಲಕ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲರ ಕ್ರಮ ಕಾನೂನು ರೀತಿಯಲ್ಲಿ ಸರಿಯಾಗಿಯೇ ಇದೆ ಎಂದು ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಹೇಳುತ್ತಾರೆ.
ಸಂವಿಧಾನಬಾಹಿರ ನಡೆ: 13 ಶಾಸಕರ ರಾಜೀನಾಮೆ ಪ್ರಕರಣ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ. ಹೀಗಾಗಿ, ಮೂವರು ಶಾಸಕರ ಅನರ್ಹತೆ ಬಳಿಕ ಸದನದ ಈಗಿನ ಸಂಖ್ಯಾಬಲ 222 ಆಗುತ್ತದೆ. ಅದರಂತೆ ಬಹುಮತಕ್ಕೆ 112 ಸಂಖ್ಯೆ ಬೇಕಾಗುತ್ತದೆ. ಈಗ ಬಿಜೆಪಿ ಬಳಿ ಇರುವುದು ಪಕ್ಷೇತರ ಶಾಸಕ ಸೇರಿ 106 ಸಂಖ್ಯಾಬಲ. ಇನ್ನೂ 6 ಸಂಖ್ಯೆಯ ಕೊರತೆ ಇದೆ. ಹೀಗಿರುವಾಗ ರಾಜ್ಯಪಾಲರು ಪ್ರಮಾಣವಚನ ಸ್ವೀಕಾರಕ್ಕೆ ಅನುಮತಿ ಕೊಟ್ಟಿರುವುದು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ. ರಾಜ್ಯಪಾಲರ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ್ ಅಭಿಪ್ರಾಯಪಡುತ್ತಾರೆ.
ಬಿಜೆಪಿಯವರು ರಾಜ್ಯಪಾಲರಿಗೆ ಸರ್ಕಾರ ರಚನೆಯ ಪ್ರಸ್ತಾವನೆ ಮಂಡಿಸಿದ್ದಾರೆ. ಅದಕ್ಕೆ ಅವರು ಅನುಮತಿ ಕೊಟ್ಟಿದ್ದಾರೆ. ಒಂದು ವಾರದಲ್ಲಿ ಬಹುಮತ ಸಾಬೀತು ಪಡಿಸಬೇಕಷ್ಟೇ. ಇದರಲ್ಲಿ ನನ್ನ ಪ್ರಕಾರ ಕಾನೂನು ಸಮಸ್ಯೆ ಪ್ರಶ್ನೆ ಬರುವುದಿಲ್ಲ. ಬಹುಮತ ಸಾಬೀತುಪಡಿಸುವಾಗ ಅನರ್ಹಗೊಳ್ಳದೇ ಇರುವ ಶಾಸಕರಿಂದ ಸಮಸ್ಯೆ ಉಂಟಾಗಬಹುದು.
– ಅಶೋಕ ಹಾರನಹಳ್ಳಿ, ಮಾಜಿ ಅಡ್ವೋಕೇಟ್ ಜನರಲ್
13 ಶಾಸಕರ ರಾಜೀನಾಮೆ ವಿಚಾರ ಇತ್ಯರ್ಥ ಬಾಕಿ ಇರುವಾಗ, ಅವರು ಸದನದಲ್ಲಿ ಈಗಲೂ ಆಯಾ ಪಕ್ಷದ ಸದಸ್ಯರಾಗಿ ಮುಂದುವರಿಯುತ್ತಾರೆ. ಹೀಗಾಗಿ ರಾಜ್ಯಪಾಲರು ಅನುಮತಿ ಕೊಟ್ಟಿರುವುದು ನೇರವಾಗಿ ಸಂವಿಧಾನದ ಉಲ್ಲಂಘನೆಯಾಗಿದೆ. ಮೇಲಾಗಿ ಇದೊಂದು ರಾಜಕೀಯ ಪ್ರಶ್ನೆಯಾಗಿರುವುದರಿಂದ ಸದನದಲ್ಲಿ ಸಾಬೀತಾಗುವ ಬಹುಮತವೇ ಅಂತಿಮವಾಗಲಿದೆ.
– ಪ್ರೊ. ರವಿವರ್ಮ ಕುಮಾರ್, ಮಾಜಿ ಅಡ್ವೋಕೇಟ್
ಜನರಲ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ಆಹ್ವಾನ ನೀಡಿರುವುದರಲ್ಲಿ ಯಾವ ಕಾನೂನು ತಪ್ಪೂ ಇಲ್ಲ. ಅಷ್ಟಕ್ಕೂ ಬಹುಮತ ಇದೆಯೋ, ಇಲ್ಲವೋ ಎಂದು ತಲೆ ಎಣಿಕೆ ಮಾಡುವ ಕೆಲಸ ರಾಜ್ಯಪಾಲರದ್ದಲ್ಲ. ಅದನ್ನು ಸದನದಲ್ಲಿ ಸಾಬೀತುಪಡಿಸುವಂತೆ ಅವರು ನಿರ್ದೇಶನ ನೀಡುತ್ತಾರೆ. ಸದನ ನಡೆದು ವಿಶ್ವಾಸಮತ ಯಾಚನೆಯ ವೇಳೆ ಯಾವ ಪಕ್ಷದ ಬಳಿ ಹೆಚ್ಚು ಸಂಖ್ಯೆ ಇರುತ್ತದೊ ಆ ಪಕ್ಷ ಸದನದ ವಿಶ್ವಾಸಪಡೆದುಕೊಳ್ಳುತ್ತದೆ.
– ಬಿ.ವಿ. ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್
-ರಫೀಕ್ ಅಹ್ಮದ್