2022ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ
Team Udayavani, Aug 18, 2022, 8:16 PM IST
ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟಿಸಲಾಗಿದ್ದು, 30 ಮಂದಿ ಜಾನಪದ ಕಲಾವಿದರು ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಇಬ್ಬರು ಜಾನಪದ ತಜ್ಞರು ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆಗೊಳಿಸಿದರು. 2022ನೇ ಸಾಲಿನಲ್ಲಿ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರಿಗೆ ಡಾ. ಜೀ.ಶಂ.ಪ ಪ್ರಶಸ್ತಿ ಹಾಗೂ ಡಾ. ಬಿ.ಎಸ್. ಗದ್ದಗಿಮಠ ಪ್ರಶಸ್ತಿ ನೀಡಲಾಗಿದೆ,
ಕಲಾವಿದರಿಗೆ ನೀಡುವ ವಾರ್ಷಿಕ ಗೌರವ ಪ್ರಶಸ್ತಿಯ ನಗದು ಮೊತ್ತ 25 ಸಾವಿರ ರೂ. ಹಾಗೂ ವಿಶೇಷ ಪ್ರಶಸ್ತಿಯ ನಗದು ಮೊತ್ತ 50 ಸಾವಿರ ರೂ. ಇರಲಿದೆ. ಅಕ್ಟೋಬರ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳುವ ಆಲೋಚನೆಯಿದೆ ಎಂದು ಮಂಜಮ್ಮ ಜೋಗತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನಮ್ರತ ಹಾಗೂ ಸದಸ್ಯ ಜೋಗಿಲ ಸಿದ್ದರಾಜು ಇದ್ದರು.
ಪ್ರಶಸ್ತಿಗೆ ಆಯ್ಕೆಯಾದವರು:
ಚಿನ್ನಮ್ಮಯ್ಯ-ಜಾನಪದ ಕಥೆಗಾರರು, ಹುಚ್ಚ ಹನುಮಯ್ಯ-ಜನಪದ ವೈದ್ಯ, ಜಿ. ಗುರುಮೂರ್ತಿ-ತತ್ವಪದ, ಹನುಮಕ್ಕ-ಸೋಬಾನೆ ಪದ, ಡಿ.ಆರ್. ರಾಜಪ್ಪ-ಜಾನಪದ ಗಾಯನ, ದೇವೇಂದ್ರಪ್ಪ-ಡೊಳ್ಳು ಕುಣಿತ, ಡಾ.ಕಾ.ರಾಮೇಶ್ವರಪ್ಪ-ಜಾನಪದ ಗಾಯನ, ಡಿ.ಜಿ. ನಾಗರಾಜಪ್ಪ-ಭಜನೆ, ನಾರಾಯಣಸ್ವಾಮಿ-ಪಂಡರಿ ಭಜನೆ, ಚನ್ನಮ್ಮ-ತತ್ವಪದ.
ಗುರುರಾಜ್-ತಂಬೂರಿ ಪದ, ರಂಗಶೆಟ್ಟಿ-ರಂಗದ ಕುಣಿತ, ಅಣ್ಣುಶೆಟ್ಟಿ-ಭೂತಾರಾಧನೆ, ಶಿವರುದ್ರಸ್ವಾಮಿ-ವೀರಭದ್ರನ ನೃತ್ಯ, ರೇವಣಸಿದ್ದಪ್ಪ-ವೀರಗಾಸೆ, ಕೆ.ಸಿ. ದೇವಕಿ-ಜಾನಪದ ಹಾಡುಗಾರಿಕೆ, ರಾಧಮ್ಮ-ಜನಪದ ಕರಕುಶಲ ಕಲೆ, ಸಾಂಬಯ್ಯ ಹಿರೇಮಠ-ಹಾಡುಗಾರಿಕೆ.
ನಾಗಮ್ಮ ಹೊನ್ನಪ್ಪ ಜೋಗಿ-ಸೋಬಾನೆ ಪದ, ವೀರಭದ್ರಪ್ಪ ಯಲ್ಲಪ್ಪ ದಳವಾಯಿ-ಏಕತಾರಿ ಪದ, ಶಿವನವ್ವ ಮಲ್ಲಪ್ಪ ಭಾವಿಕಟ್ಟಿ- ಹಂತಿ ಪದ, ಚಂದ್ರಪ್ಪ ಯಲ್ಲಪ್ಪ ಭಜಂತ್ರಿ- ಶಹನಾಯಿ ವಾದನ, ಪುಂಡಲೀಕ ಮಾದರ-ಹಲಗೆವಾದನ. ಶಾರದ ಮಹಾದೇವ ಮೊಗೇರ-ಸಂಪ್ರದಾಯ ಪದ, ಅಂಜಿನಮ್ಮ ಜೋಗತಿ-ಜೋಗತಿ ನೃತ್ಯ, ಪ್ರಕಾಶಯ್ಯ ನಂದಿ-ಗೀಗೀಪದ, ದೊಡ್ಡ ಯಮನೂರಪ್ಪ ಭೀಮಪ್ಪ ಭಜಂತ್ರಿ-ಶಹನಾಯಿ ವಾದನ, ಶರಣಬಸಯ್ಯ ಶಂಕರಯ್ಯ ಮಠಪತಿ-ತತ್ವಪದ, ರಾಧಾಬಾಯಿ ಕೃಷ್ಣರಾವ ಮಾಲಿಪಾಟೀಲ-ಸಂಪ್ರದಾಯ ಪದ, ಭಾರತೀಬಾಯಿ-ಲಂಬಾಣಿ ನೃತ್ಯ.
ವಿಶೇಷ ಪ್ರಶಸ್ತಿ:
ಡಾ. ಜೀ.ಶಂ.ಪ ಪ್ರಶಸ್ತಿ-ವ.ನಂ ಶಿವರಾಮು, ಡಾ.ಬಿ.ಎನ್.ಗದ್ದಗಿಮಠ ಪ್ರಶಸ್ತಿ-ಡಾ. ಶಂಭು ಬಳಿಗಾರ.