“ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟ
Team Udayavani, Dec 21, 2019, 3:00 AM IST
ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಶುಕ್ರವಾರ 2019-20ನೇ ಸಾಲಿನ ” ಕರ್ನಾಟಕ ಕಲಾಶ್ರೀ’ (ಗೌರವ ಮತ್ತು ವಾರ್ಷಿಕ ಪ್ರಶಸ್ತಿ) ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಹಾಡುಗಾರಿಕೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿವಮೊಗ್ಗದ ಮತ್ತೂರು ಗೋಪಾಲ್ (ಅಂಧರು) ಹಾಗೂ ಕಥಕ್ನಲ್ಲಿ ಅಪ್ರತಿಮ ಸಾಧನೆ ತೋರಿರುವ ಮೈಸೂರಿನ ಬಿ.ನಾಗರಾಜು ಅವರು ಅಕಾಡೆಮಿಯ “ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಹಾಗೆಯೇ ಕರ್ನಾಟಕ ಸಂಗೀತ, ನೃತ್ಯ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಕಥಾಕೀರ್ತನ, ಗಮಕ ಹಾಗೂ ಹೊರನಾಡ ಕಲಾವಿದರಿಗೆ ನೀಡಲಾಗುವ “ವಾರ್ಷಿಕ ಪ್ರಶಸ್ತಿ’ಯನ್ನು ಕೂಡ ಪ್ರಕಟಿಸಲಾಗಿದೆ. ನೃತ್ಯ ವಿಭಾಗದಲ್ಲಿ ಮಂಗಳೂರಿನ ಕಮಲಾಭಟ್ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಕೆ.ಎಸ್.ಸುರೇಖಾ ಅವರುಗಳು “ವಾರ್ಷಿಕ ಕಲಾಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆ ಹೊಂದಿದೆ. 2020 ರ ಫೆಬ್ರವರಿ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮದಲ್ಲಿ ಸಾಧಕರಿಗೆ “ಕಲಾಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕರ್ನಾಟಕ ಸಂಗೀತ ವಿಭಾಗ: ಮೈಸೂರಿನ ಆರ್.ಎಸ್. ನಂದಕುಮಾರ (ಹಾಡುಗಾರಿಕೆ), ಬೆಂಗಳೂರಿನ ಎಂ.ಟಿ.ರಾಜಕೇಸರಿ (ಮೃದಂಗ), ಮೇಲುಕೋಟೆಯ ಎಂ.ಎನ್.ಗಣೇಶ್ (ನಾದಸ್ವರ).
ಹಿಂದೂಸ್ತಾನಿ ಸಂಗೀತ ವಿಭಾಗ: ಕಲಬುರಗಿಯ ಫಕಿರೇಶ ಕಣವಿ (ಗಾಯನ), ಬೆಳಗಾವಿಯ ಎಸ್. ಬಾಲೇಶ್ (ಶಹನಾಯಿ), ಬೆಂಗಳೂರಿನ ಎಂ.ನಾಗೇಶ್ (ತಬಲಾ), ಹುಬ್ಬಳ್ಳಿಯ ಶಶಿಕಲಾ ದಾನಿ (ಜಲತರಂಗ).
ನೃತ್ಯ ವಿಭಾಗ: ಮಂಗಳೂರಿನ ಕಮಲಾ ಭಟ್, ಬೆಂಗಳೂರಿನ ಎ.ಅಶೋಕ ಕುಮಾರ, ಕಲಬುರಗಿಯ ಶುಭಾಂಗಿ (ಎಲ್ಲರೂ ಭರತನಾಟ್ಯ).
ಸುಗಮ ಸಂಗೀತ ವಿಭಾಗ: ದಕ್ಷಿಣ ಕನ್ನಡದ ಕೆ.ಎಸ್.ಸುರೇಖಾ, ಧಾರವಾಡದ ಡಾ.ಡಿ.ಪಿ.ಜ್ಯೋತಿಲಕ್ಷ್ಮೀ.
ಕಥಾಕೀರ್ತನ ವಿಭಾಗ: ಗದಗ್ನ ಬಸವಣ್ಣಯ್ಯ ಶಾಸ್ತ್ರಿಗಳು ಬಸವನಕಟ್ಟಿ, ತುಮಕೂರಿನ ನರಸಿಂಹದಾಸ್.
ಗಮಕ ವಿಭಾಗ: ಚಿಕ್ಕಮಗಳೂರಿನ ರಾಮ ಸುಬ್ರಾಯಶೇಟ್.
ಹೊರನಾಡ ಕಲಾವಿದರ ವಿಭಾಗ: ಬಾಂಬೆಯ ಓಂಕಾರನಾಥ್ ಗುಲ್ವಾಡಿ (ಹಿಂದೂಸ್ತಾನಿ ಸಂಗೀತ-ತಬಲಾ).