2018-19ರಲ್ಲಿ ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಬದ್ಧ: ಜಾವ್ಡೇಕರ್
Team Udayavani, Jan 24, 2018, 6:12 PM IST
ನವದೆಹಲಿ: ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಗೆ ಮಂಜೂರು ಮಾಡಿದ್ದ ಐಐಐಟಿ(ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಪತ್ರವನ್ನು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಸಚಿವ ಅನಂತ್ ಕುಮಾರ್ ಅವರಿಗೆ ಬುಧವಾರ ನೀಡಿದ್ದಾರೆ.
ಕರ್ನಾಟಕದಲ್ಲಿ ಸದಾ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಬೇಡಿಕೆ ಇದೆ. ಹೀಗಾಗಿ ಐಐಐಟಿ ಸ್ಥಾಪನೆಗೆ ಕೇಂದ್ರ ಮುಂದಾಗಿದೆ. 2018-19ನೇ ಸಾಲಿನಲ್ಲಿ ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಕೇಂದ್ರ ಬದ್ಧವಾಗಿದೆ ಎಂದು ಜಾವ್ಡೇಕರ್ ಹೇಳಿದರು.
ರಾಯಚೂರು ಜಿಲ್ಲೆಗೆ ಕೇಂದ್ರ ಸರ್ಕಾರ ಐಐಐಟಿಯನ್ನು ಮಂಜೂರು ಮಾಡಿತ್ತು. ಈ ಹಿಂದೆ ರಾಯಚೂರು ಜಿಲ್ಲೆಯ ಜನರು ಐಐಟಿಗೆ ಬೇಡಿಕೆ ಇಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಅನುಮತಿ ನೀಡಿತ್ತು. ಇದರಿಂದ ಅಸಮಾಧಾನಗೊಂಡು ರಾಯಚೂರು ಜಿಲ್ಲೆಯ ಜನರು ಪ್ರತಿಭಟನೆ, ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಸಚಿವ ಜಾವ್ಡೇಕರ್ ಅವರು ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಿದ್ದಕ್ಕಾಗಿ 2016ರಲ್ಲಿ ಐಐಐಟಿಯನ್ನು ಮಂಜೂರು ಮಾಡಿರುವುದಾಗಿ ಘೋಷಿಸಿದ್ದರು.