ಮುದ್ರಾ ಯೋಜನೆಯಲ್ಲಿ ಕರ್ನಾಟಕವೇ ನಂ.1
Team Udayavani, Oct 8, 2017, 11:19 AM IST
ಬೆಂಗಳೂರು: ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಮುದ್ರಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಇದು ರಾಜ್ಯಕ್ಕೆ ಹೆಮ್ಮೆ ತರುವಂತಹದ್ದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಮುದ್ರಾ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 27 ಲಕ್ಷಕ್ಕೂ ಅಧಿಕ ಮಂದಿ ಸುಮಾರು 24,894 ಕೋಟಿ ರೂ. ಸಾಲ, ಸೌಲಭ್ಯ ಪಡೆದುಕೊಂಡು ಸ್ವಉದ್ಯೋಗಿಗಳಾಗಿದ್ದಾರೆ. ಇದಕ್ಕೆ ರಾಜ್ಯದ
ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಅಧಿಕವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಈ ಅವಧಿಯಲ್ಲಿ 1.5ಕೋಟಿ ಉದ್ಯೋಗ ಸೃಷ್ಟಿಯಾಗಿ ಇತಿಹಾಸ ನಿರ್ಮಿಸಿದೆ ಎಂದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 70 ವರ್ಷಗಳಲ್ಲಿ ಆಗದ ಆರ್ಥಿಕ ಸುಧಾರಣೆ
ಯನ್ನು ಕೇವಲ ಮೂರೇ ವರ್ಷಗಳಲ್ಲಿ ಸಾಧಿಸಿದ್ದಾರೆ. ಕೇಂದ್ರ ಸರ್ಕಾರದ ಮುದ್ರಾ ಪ್ರೋತ್ಸಾಹ ಅಭಿಯಾನವನ್ನು ದೇಶದ 50 ಕಡೆಗಳಲ್ಲಿ ಹಾಗೂ ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ(ಅ.12), ಮಂಗಳೂರಿ(ಅ.16)ನಲ್ಲಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಮುದ್ರಾ
ಯೋಜನೆ ಮತ್ತು ಭೀಮಾ ಆ್ಯಪ್ ಬಗ್ಗೆ ಕಿರುಚಿತ್ರ ಪ್ರದರ್ಶಿಸಲಾಯಿತು. ಸಂಸದ ಪಿ.ಸಿ.ಮೋಹನ್, ಶಾಸಕ
ಡಾ.ಅಶ್ವತ್ ನಾರಾಯಣ್, ಐಎಎಸ್ ಅಧಿಕಾರಿ ವಿಜಯಭಾಸ್ಕರ್, ಕೇಂದ್ರ ಹಣಕಾಸು ಸೇವೆ ನಿರ್ದೇಶಕಿ ಮುದಿತಾ ಮಿಶ್ರಾ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ರಾವ್ ಇದ್ದರು.