ಸಿಬಿಐ ವಿರುದ್ಧ ಪ್ರತಿಭಟನೆಗೆ ಕಿಸಾನ್ ಘಟಕ ನಿರ್ಧಾರ
Team Udayavani, Nov 5, 2019, 3:00 AM IST
ಬೆಂಗಳೂರು: ಕೇಂದ್ರದ “ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯಲ್ಲಿ ರೈತರಿಗೆ ಮೋಸ ಮಾಡಿದ್ದಾರೆಂದು ಪ್ರಧಾನಿ ಮೋದಿ ವಿರುದ್ಧ ನೀಡಿರುವ ದೂರಿನ ತನಿಖೆ ನಡೆಸುವಂತೆ ಆಗ್ರಹಿಸಿ ಸಿಬಿಐ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಿಸಾನ್ ಘಟಕ ನಿರ್ಧರಿಸಿದೆ. ಪಕ್ಷದ ಕಚೇರಿಯಲ್ಲಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಅಲ್ಲದೇ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿ ನ.8ಕ್ಕೆ ಮೂರು ವರ್ಷ ಆಗುತ್ತಿದೆ. ಕೇಂದ್ರದ ಈ ತಪ್ಪು ನೀತಿ ವಿರುದ್ಧ ಜನ ಜಾಗೃತಿ ಮೂಡಿಸಲು ಕಿಸಾನ್ ಘಟಕ ನಿರ್ಧರಿಸಿದೆ. ಅಲ್ಲದೇ ಘಟಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸದ 16 ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಪದಾಧಿಕಾರಿಗಳಾಗಿ ನೇಮಕಗೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸದೇ ಇರುವವರನ್ನು ಕೈ ಬಿಡಲು ಕಾರ್ಯಕಾರಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿನ್ ಮೀಗಾ ತಿಳಿಸಿದ್ದಾರೆ.