ಕೆಎಂಎಫ್ ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆಗೆ ಮನವಿ
Team Udayavani, Aug 26, 2019, 3:04 AM IST
ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ. ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿಲ್ಲದೆ ಇರುವುದರಿಂದ ಕೆಎಂಎಫ್ ಅಧ್ಯಕ್ಷನಾಗಲು ಬಯಸಿದ್ದೇನೆ. ಹದಿನೈದು ಸದಸ್ಯರಿರುವ ಕೆಎಂಎಫ್ನಲ್ಲಿ ಐವರು ಸದಸ್ಯರು ನಾನೇ ಅಧ್ಯಕ್ಷರಾಗುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ರಮೇಶ್ ಜಾರಕಿಹೊಳಿಯ ಪುತ್ರನ ಬೆಂಬಲ ಇದೆ.
ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ ಅವರಿಗೂ ಬೆಂಬಲಿಸು ವಂತೆ ಮನವಿ ಮಾಡಿದ್ದೇನೆ. ಒಬ್ಬರು ನಾಮ ನಿರ್ದೇಶನ ಸದಸ್ಯರು ಹಾಗೂ ಇಬ್ಬರು ಅಧಿಕಾರಿಗಳು ನಿರ್ದೇಶಕರಾಗಿರುವುದರಿಂದ ಅವರ ಬೆಂಬಲವೂ ಇದೆ. ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದರೂ ಗೆಲ್ಲುವ ವಿಶ್ವಾಸ ಇದೆ. ಚುನಾವಣೆಗೆ ಎಲ್ಲ ರೀತಿಯ ತಯಾರಿ ಮಾಡಿ ಕೊಂಡೇ ನಾಮ ನಿರ್ದೇಶನ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಅವಿರೋಧ ಆಯ್ಕೆಗೆ ಎಲ್ಲ ನಿರ್ದೇಶಕರೂ ಬೆಂಬಲ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.