ಕೊಡಗು: 6,603 ಮಂದಿ ಶಿಫ್ಟ್
Team Udayavani, Aug 12, 2019, 3:00 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ಕಡಿಮೆಯಾಗುತ್ತ ಬರುತ್ತಿದೆ. ಆದರೆ, ಚಳಿ ಮತ್ತು ಬಿರುಗಾಳಿ ಇದೆ. ಜಿಲ್ಲೆಯಲ್ಲಿ 79 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸುಮಾರು 741ಕ್ಕೂ ಹೆಚ್ಚು ಜನರು ಮತ್ತು 23ಕ್ಕೂ ಹೆಚ್ಚು ಜಾನುವಾರು ಗಳನ್ನು ರಕ್ಷಿಸಲಾಗಿದೆ.
ರಕ್ಷಣೆ ಕಾರ್ಯದಲ್ಲಿ ಎನ್ಡಿಆರ್ಎಫ್, ಭಾರತೀಯ ಸೇನೆ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ, ಪೊಲೀಸ್ ಇಲಾಖೆ, ಕಂದಾಯ ಮತ್ತು ರಿವರ್ ರ್ಯಾಫ್ಟಿಂಗ್ ಅಸೋಸಿಯೇಶನ್, ವಿವಿಧ ಗ್ರಾ.ಪಂ. ಮತ್ತು ಪಶುಪಾಲನ ಇಲಾಖೆ ಸಹಕರಿಸಿವೆ.
ಜಿಲ್ಲೆಯಲ್ಲಿ ಒಟ್ಟು 48 ಪರಿಹಾರ ಕೇಂದ್ರ ತೆರೆಯಲಾಗಿದ್ದು, 1970 ಕುಟುಂಬಗಳ 6,603 ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ, ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸರಿಪಡಿಸುವ ಕಾರ್ಯ ಜಿಲ್ಲಾಡಳಿತದಿಂದ ನಡೆದಿದೆ.