ಕೋವಿಂದ್ಗೆ ದೇವೇಗೌಡ, ಸಿದ್ದು, ಖರ್ಗೆ, ಪರಮೇಶ್ವರ್ ಅಭಿನಂದನೆ
Team Udayavani, Jul 21, 2017, 9:37 AM IST
ಬೆಂಗಳೂರು: ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ,
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಎಚ್.ಡಿ.ದೇವೇಗೌಡರು ಕೋವಿಂದ್ ಅವರಿಗೆ ಪತ್ರ ಬರೆದು, ಸಾರ್ವಜನಿಕ ಜೀವನದಲ್ಲಿ ನಿಮ್ಮ ಅನುಭವ ಹಾಗೂ ನಿಮ್ಮ ನಾಯಕತ್ವದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಎತ್ತಿ ಹಿಡಿಯುವಂತಾಗಲಿ ಎಂದು ಆಶಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ತತ್ವ ಸಿದ್ಧಾಂತಗಳ ಮೇಲೆ ನಡೆದ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಸೋತ ಬಳಿಕ ಇದರ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಸೋಲುವುದು ಖಚಿತ ಅಂತ ತಿಳಿದು ಸ್ಪರ್ಧೆಯಿಂದ ದೂರ ಉಳಿಯಲು ಆಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಇರಲೇಬೇಕು. ಸೋಲುವ ಭೀತಿಯಿಂದ ಎಲ್ಲ ಚುನಾವಣೆಯನ್ನೂ ಬಿಜೆಪಿಯವರಿಗೆ ಬಿಟ್ಟು ಕೊಡಲು ಆಗುತ್ತಾ ಎಂದು ಪ್ರಶ್ನಿಸಿದರು. ಪ್ರಣಬ್ ಮುಖರ್ಜಿ ರೀತಿಯಲ್ಲಿ ರಾಮನಾಥ ಕೋವಿಂದ್ ಎಲ್ಲ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿ
ಎಂದು ತಿಳಿಸಿದರು. ಕೋವಿಂದ್ ಪ್ರಜಾಪ್ರಭುತ್ವದ ಆಶಯ ಉಳಿಸುತ್ತಾರೆಂಬ ವಿಶ್ವಾಸವಿದೆ. ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾ ಕುಮಾರ್ ಶೇ.44 ಮತ ಪಡೆದು ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತ ಇದೆ ಎನ್ನುವುದನ್ನು ತೋರಿಸಿದ್ದಾರೆ. ಬಿಹಾರ
ಮುಖ್ಯಮಂತ್ರಿ ನಿತೀಶ್ ಕುಮಾರ್ ಯುಪಿಎ ಜೊತೆಗಿದ್ದರೆ, ಮೀರಾ ಗೆಲ್ಲುತ್ತಿದ್ದರು.
ನಮ್ಮ ನೀರೀಕ್ಷೆಗಿಂತ ಶೇ.10 ಮತಗಳು ಹೆಚ್ಚಿಗೆ ಬಂದಿವೆ. ಅಂದರೆ, ಕೆಲವರು ತಮ್ಮ ಆತ್ಮಸಾಕ್ಷಿಯ ಮತಗಳನ್ನು ನೀಡಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.