ಬಿಎಸ್ವೈಗೆ ಕೃಷ್ಣ ಹೊಣೆ?
Team Udayavani, Feb 5, 2017, 3:50 AM IST
ಬೆಂಗಳೂರು: ಕಾಂಗ್ರೆಸ್ ತೊರೆದಿರುವ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿರುವ ಬಿಜೆಪಿ ಹೈಕಮಾಂಡ್, ಈ ಕುರಿತು ಮಾತುಕತೆ ನಡೆಸಿ ಅವರನ್ನು ಅಧಿಕೃತವಾಗಿ ಆಹ್ವಾನಿಸುವ ಜವಾಬ್ದಾರಿಯನ್ನು ಪಕ್ಷದ
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದೆ. ಆದರೆ, ಕೃಷ್ಣ ಅವರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗುವವರೆಗೆ ಮುಂದುವರಿಯದಂತೆ ಸಲಹೆಯನ್ನೂ ನೀಡಿದೆ. ಹೀಗಾಗಿ ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಅವರನ್ನು ಬಿಜೆಪಿಗೆ ಅಧಿಕೃತವಾಗಿ ಆಹ್ವಾನಿಸಲು ಯಡಿಯೂರಪ್ಪ ಅವರು ತೀರ್ಮಾನಿಸಿದ್ದು, ಈ ಕುರಿತು ಕೃಷ್ಣ ಅವರಿಗೆ
ಸಂದೇಶವನ್ನೂ ರವಾನಿಸಿದ್ದಾರೆ.
ಅವರು ಬಿಜೆಪಿಗೆ ಬರಲು ಸಮ್ಮತಿಸಿದ ಬಳಿಕ ಯಡಿಯೂರಪ್ಪ ಅವರು ಭೇಟಿಯಾಗಿ ಅಧಿಕೃತವಾಗಿ ಪಕ್ಷಕ್ಕೆ ಆಹ್ವಾನಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಕರೆತರುವ ವಿಚಾರದಲ್ಲಿ
ಈಗಾಗಲೇ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಬೆಂಗಳೂರಿನ ಕೆಲವು ಶಾಸಕರು ಹಾಗೂ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಸದ್ಯಕ್ಕೆ ಬಿಜೆಪಿ ಸೇರುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಕಷ್ಟ. ಆ ದಿನ ಬಂದಾಗ ನಾನೇ ತಿಳಿಸುತ್ತೇನೆಂದು ಕೃಷ್ಣ ಹೇಳಿ ಕಳುಹಿಸಿದ್ದರು.