ಕುಮಟಳ್ಳಿಗಿಲ್ಲ ಸಚಿವ ಸ್ಥಾನ: ಶ್ರೀಗಳ ಬೇಸರ
Team Udayavani, Feb 7, 2020, 3:04 AM IST
ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದವರಲ್ಲಿ ಒಬ್ಬರಾದ ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಸಚಿವ ಸ್ಥಾನ ನೀಡದಿರುವುದು ಪಂಚಮಸಾಲಿ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೆದ್ದಿರುವ 10 ಜನ ಶಾಸಕರಿಗೆ ಸಚಿವ ಸ್ಥಾನ ನೀಡಿ, ಕುಮಟಳ್ಳಿ ಒಬ್ಬರನ್ನೇ ಕೈ ಬಿಟ್ಟಿರುವುದು ಸರಿಯಲ್ಲ. ಕುಮಟಳ್ಳಿ ಅವರು ಆರಂಭದಲ್ಲಿ ರಮೇಶ ಜಾರಕಿಹೊಳಿ ಅವರೊಂದಿಗೆ ಇದ್ದವರು. ನ್ಯಾಯ, ವಿಶ್ವಾಸ, ನಂಬಿಕೆ, ಸೈದ್ಧಾಂತಿಕ ರಾಜಕಾರಣ ಇರಬೇಕೆಂಬುದು ನಮ್ಮ ಬೇಡಿಕೆ. ಕುಮಟಳ್ಳಿ ಅವರನ್ನು ಕೈ ಬಿಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ತಪ್ಪು ಸರಿಪಡಿಸಿಕೊಂಡು ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.