ಎಸ್ಟಿಗೆ ಸೇರಿಸದಿದ್ದರೆ ರಾಜ್ಯಕ್ಕೆ ಬೆಂಕಿ
Team Udayavani, Feb 20, 2021, 6:00 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಎರಡು ಪ್ರಮುಖ ಸಮುದಾಯಗಳ ಮೀಸಲಾತಿ ಹೋರಾಟ ತಾರಕಕ್ಕೇರು ತ್ತಿದ್ದು, ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ ದಿದ್ದರೆ ರಾಜ್ಯಕ್ಕೆ ಬೆಂಕಿ ಬೀಳಲಿದೆ ಎಂದು ಕುರುಬ ಸಮುದಾಯ ಎಚ್ಚರಿಸಿದೆ.
ಶುಕ್ರವಾರ ನಗರದ ಆನಂದ ರಾವ್ ವೃತ್ತದ ಬಳಿ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಮುದಾಯದ ಮುಖಂಡರು, ನಮ್ಮ ಎಸ್ಟಿ ಹೋರಾಟ ಬಹು ದಿನಗಳ ಕನಸಾಗಿದೆ. ಸರಕಾರ ಈಗಲಾದರೂ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು.
ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕುರುಬ ಸಮಾಜದವರಿಗೆ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಎಸ್ಟಿ ಮೀಸಲಾತಿ ಕಲ್ಪಿಸಲಾಗಿದೆ. ಅದನ್ನು ಎಲ್ಲ ಜಿಲ್ಲೆಯಲ್ಲಿರುವ ಕುರುಬರಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಬಿಬಿಎಂಪಿ ಮಾಜಿ ಮೇಯರ್ ಡಿ. ವೆಂಕಟೇಶ ಮೂರ್ತಿ ಮಾತನಾಡಿ, ಪ್ರದೇಶ ಕುರುಬರ ಸಂಘ ಇಂದು ಸಾಂಕೇತಿಕವಾಗಿ ಧರಣಿ ನಡೆಸಿದೆ. ಬೇಡಿಕೆ ಈಡೇರಿ ಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾ ಗಿದ್ದ ಕಾಂತರಾಜ್ ಅವರ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದ ಅವರು, ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಿ, 400 ಕೋ.ರೂ.ಗಳನ್ನು ಕಾದಿರಿಸಬೇಕು. 2ಎ ಮೀಸಲಾತಿ ಪಟ್ಟಿಗೆ ಯಾವುದೇ ಮುಂದುವರಿದ ಜಾತಿಗಳನ್ನು ಸೇರಿಸಬಾರದು ಎಂದು ಹೇಳಿದರು.