ಸೌಲಭ್ಯ ಕೊರತೆ: ಪಾಲಿಟೆಕ್ನಿಕ್ ಕಾಲೇಜುಗಳ ದಾಖಲಾತಿ ಕಡಿತ
Team Udayavani, Sep 5, 2021, 6:17 AM IST
ಬೆಂಗಳೂರು: ಸೌಲ ಭ್ಯದ ಕೊರತೆ ಎದುರಿಸುತ್ತಿರುವ ಕೆಲವು ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳ ಪ್ರವೇಶಾತಿ ಪ್ರಮಾಣವನ್ನು ರಾಜ್ಯ ಸರಕಾರ ಕಡಿಮೆ ಮಾಡಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯಿಂದ ಮಾನ್ಯತೆ ಪಡೆದಿರುವ ರಾಜ್ಯದ 43 ಅನುದಾನಿತ ಪಾಲಿಟೆಕ್ನಿಕ್ಗಳಿಗೆ 2021-22ನೇ ಸಾಲಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣವನ್ನು ನಿಗದಿ ಮಾಡಿ ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಕೆಲವು ಪಾಲಿಟೆಕ್ನಿಕ್ಗಳಿಗೆ ಪ್ರವೇಶ ಪ್ರಮಾಣವನ್ನು ಕಡಿಮೆ ಮಾಡಿದೆ. ಕಳೆದ ವರ್ಷ 330 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದ್ದ ಕಾಲೇಜಿಗೆ 299 ವಿದ್ಯಾರ್ಥಿಗಳಿಗೆ ಅನುಮತಿ ನೀಡಿದೆ.
275 ವಿದ್ಯಾರ್ಥಿಗಳ ಪ್ರವೇಶಾನುಮತಿ ಇದ್ದ ಪಾಲಿಟೆಕ್ನಿಕ್ಗಳಲ್ಲಿ 210 ಹಾಗೂ 250 ಇದ್ದಲ್ಲಿ 225ಕ್ಕೆ ಇಳಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸದಾಗಿ ಆರಂಭಿಸಲಾಗಿರುವ 8 ಕೋರ್ಸ್ಗಳಿಗೆ ಕಾಲೇಜಿನಲ್ಲಿ ಅಳವಡಿಸಿಕೊಂಡಿರುವ ಕೋರ್ಸ್ನ ಆಧಾರದಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸರಕಾರ ಅನುಮತಿ ನೀಡಿದೆ.
ಯುವಿಸಿಇ ಸ್ವಾಯತ್ತ ಮಾನ್ಯತೆಗೆ ಮಸೂದೆ :
ಬೆಂಗಳೂರು: ಐಐಟಿ ಮಾದರಿಯಲ್ಲಿ ನಗರದ ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ (ಯುವಿಸಿಇ) ಸ್ವಾಯತ್ತತೆ ನೀಡುವ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ಬ್ರಿಗೇಡ್ ಗೈಟ್ವೇ ಕ್ಯಾಂಪಸ್ನಲ್ಲಿ ಸ್ಥಾಪಿಸಲಾಗಿರುವ 11.6 ಅಡಿ ಎತ್ತರದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಲೋಹದ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಸರಕಾರ ವಿಶೇಷ ಒತ್ತು ನೀಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ಕನಸುಗಳನ್ನು ಸಾಕಾರ ಮಾಡಲು ಎಲ್ಲ ಕ್ರಮಗಳನ್ನು ವಹಿಸಿದ್ದೇವೆ ಎಂದು ತಿಳಿಸಿದರು.