“ರಾಜ್ಯ ಸರ್ಕಾರ ಅಸ್ಥಿರ ಎಂಬ ಭಾವನೆ ಬಿಟ್ಟುಬಿಡಿ’
Team Udayavani, Jun 13, 2019, 3:00 AM IST
ಬೆಂಗಳೂರು: “ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರ ಇಲ್ಲ ಎಂದು ಕೆಲವರು ಅಂದುಕೊಂಡಿದ್ದಾರೆ. ಕೆಲ ಅಧಿಕಾರಿಗಳೇ ಹೀಗೆ ಮಾತನಾಡಿಕೊಳ್ಳುತ್ತಿರುವುದು ನನಗೆ ಗೊತ್ತಿದೆ. ಅಧಿಕಾರಿಗಳು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ. ನಾವು ಸರ್ಕಾರವನ್ನು ಭದ್ರ ಮಾಡಿಕೊಳ್ಳುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರಿಗಳು ಕಾಮಿಡಿಗಾಗಿ ಸರ್ಕಾರ ಬೀಳುವ ಬಗ್ಗೆ ಮಾತನಾಡಬೇಡಿ ಎಂದು ತಾಕೀತು ಮಾಡಿದರು.
ಸರ್ಕಾರ ಅಸ್ಥಿರ ಎಂದು ಅಧಿಕಾರಿಗಳು ತಲೆಗೆ ಹಾಕಿಕೊಂಡರೆ ಅಭಿವೃದ್ಧಿ ಕೆಲಸ ಆಗಲ್ಲ. ಸರ್ಕಾರ ಬೀಳುತ್ತೆ ಎಂಬ ಆಲೋಚನೆಯನ್ನೇ ಬಿಟ್ಟು ಬಿಡಿ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ. ರಾಜ್ಯದಲ್ಲಿ ಶೇ.90ರಷ್ಟು ಬಿಪಿಎಲ್ ಪಡಿತರ ಕಾರ್ಡ್ಗಳಿರುವ ಮಾಹಿತಿಯಿದೆ.
ಅಭಿವೃದ್ಧಿಯತ್ತ ನಡೆಯುತ್ತಿರುವ ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದ ಬಡವರು ಇನ್ನೂ ಇದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಬಿಪಿಎಲ್ ಪಡಿತರ ಕಾರ್ಡ್ಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಮರು ಸಮೀಕ್ಷೆ ನಡೆಯಬೇಕು ಎಂದು ಸೂಚಿಸಿದರು.