ಸದ್ಯ ದೇವರ ದರ್ಶನಕ್ಕೆ ಮಾತ್ರ ಅವಕಾಶ: ಸಚಿವ
Team Udayavani, Jun 14, 2020, 6:59 AM IST
ಸುಬ್ರಹ್ಮಣ್ಯ: ರಾಜ್ಯದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಕ್ರಮ ಕೈಗೊಳ್ಳಲಿ ದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶನಿವಾರ ಸುಬ್ರಹ್ಮಣ್ಯದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಪರೀಕ್ಷೆ ಫಲಿತಾಂಶ ಭಿನ್ನವಾಗಿ ಲಭಿಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿ, ವ್ಯಕ್ತಿಗಳು ದೂರದೂರುಗಳಿಂದ ಬಂದು ತುಂಬಾ ದಿನ ಕಳೆದು ಪರೀಕ್ಷೆ ಮಾಡಿಸಿದಾಗ ವ್ಯತ್ಯಾಸ ಕಂಡುಬರುತ್ತಿರಬಹುದು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ರಾಜ್ಯದ 62 ದೇಗುಲಗಳ ವ್ಯವಸ್ಥಾಪನ ಸಮಿತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೋವಿಡ್ 19 ಇರುವುದರಿಂದ ದಿನಾಂಕ ವಿಸ್ತರಿಸಲು ಮನವಿ ಬರುತ್ತಿವೆ.
ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಬಾಡಿಗೆ ಬಾಕಿ, ನೌಕರರ ಅಮಾನತು ವಿಚಾರದಲ್ಲಿ ಲಿಖೀತ ದೂರು ಬಂದಲ್ಲಿ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಅಭಿವೃದ್ಧಿಗೆ ಸಹಕಾರ ನೀಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಇನ್ನು ಕೋವಿಡ್ 19 ಕಾರಣಗಳಿಂದ ಬಾಕಿಯಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆ.15ರ ಬಳಿಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.