ವಿಶ್ವಾಸಮತ ಸಾಬೀತುಪಡಿಸುತ್ತೇವೆ: ದಿನೇಶ್
Team Udayavani, Jul 14, 2019, 3:04 AM IST
ಬೆಂಗಳೂರು: ಕಾಂಗ್ರೆಸ್ ಶಾಸಕರು ಉಳಿದುಕೊಂಡಿರುವ ಯಶವಂತಪುರದ ತಾಜ್ ವಿವಾಂತ ಹೋಟೆಲ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಹಲವು ನಾಯಕರು ಶನಿವಾರ ಭೇಟಿ ನೀಡಿದ್ದರು. ಶಾಸಕರ ಜತೆ ಮಾತನಾಡಿದ ದಿನೇಶ್ ಗುಂಡೂರಾವ್, ಸಮ್ಮಿಶ್ರ ಸರ್ಕಾರ ಉಳಿಯಲಿದೆ. ಯಾರೂ ಆತುರದ ತೀರ್ಮಾನ ಕೈಗೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯದಲ್ಲಿ ಬಿಜೆಪಿ ತೊಡಗಿದೆ. ನಮ್ಮ ಶಾಸಕರು ರೆಸಾರ್ಟ್ನಲ್ಲಿ ಇರಬೇಕು ಅಂತ ಏನಿಲ್ಲ. ಆದರೆ, ಬಿಜೆಪಿಯವರು ಅವರನ್ನು ಸೆಳೆಯುವ ಯತ್ನ ಮಾಡುತ್ತಿದ್ದು, ಎಲ್ಲರೂ ಒಂದೇ ಕಡೆ ಇರಲಿ ಎಂದು ಹೋಟೆಲ್ನಲ್ಲಿ ಜತೆಗಿದ್ದೇವೆ.
ನಾವು ವಿಶ್ವಾಸಮತ ಸಾಬೀತುಪಡಿಸುತ್ತೇವೆ. ಸ್ಪೀಕರ್ ದಿನಾಂಕ ನಿಗದಿಪಡಿಸಿದ ದಿನ ವಿಶ್ವಾಸಮತ ಯಾಚಿಸಲು ಸಿದ್ಧರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಹಿರಿಯ ನಾಯಕ ಎಚ್.ಕೆ.ಪಾಟೀಲ್ ಸಹ ಹೋಟೆಲ್ಗೆ ಭೇಟಿ ನೀಡಿ ಶಾಸಕರ ಜತೆ ಚರ್ಚಿಸಿದರು.