ಜಮೀರ್ಗೆ ಮೀಟ್ರಿದ್ರೆ ಕುಣಿಗಲ್ನಲ್ಲಿ ಸ್ಪರ್ಧಿಸಲಿ
Team Udayavani, Oct 10, 2017, 9:20 AM IST
ಹಾಸನ: “ಹೊಳೆನರಸೀಪುರ ನನ್ನ ರಾಜಕೀಯ ಜನ್ಮ ಸ್ಥಳ, ನನ್ನ ಕಾರ್ಯಕ್ಷೇತ್ರ. ಅದನ್ನು ಬಿಟ್ಟು ನಾನೆಲ್ಲೂ ಹೋಗಲ್ಲ. ಜಮೀರ್ ಅಹಮದ್ಗೆ ಮೀಟರ್ ಇದ್ರೆ ಅವರ ತವರೂರು ಕುಣಿಗಲ್ನಲ್ಲಿ ಚುನಾವಣೆಗೆ ಸ್ಪರ್ಧಿಸಿಗೆಲ್ಲಲಿ ನೋಡೋಣ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಶಾಸಕ ಜಮೀರ್ ಅಹಮದ್ಗೆ ಪ್ರತಿ ಸವಾಲು ಹಾಕಿದರು.
“ರೇವಣ್ಣಗೆ ಮೀಟರ್ ಇದ್ದರೆ 2018ರ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ’ ಎಂಬ ಶಾಸಕ ಜಮೀರ್ ಅಹಮದ್ ಸವಾಲಿಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಪ್ರತಿಕ್ರಿಯಿಸಿದ ಅವರು, “ನಮ್ಮ (ಜೆಡಿಎಸ್) ಹಂಗಿನಲ್ಲಿ ಅನ್ನ ತಿನ್ನುತ್ತಿರುವ ಜಮೀರ್ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ತಮ್ಮ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು. “ಕಾಂಗ್ರೆಸ್ಗೆ ಸೇರಿಸಿಕೊಂಡು ಮುಸ್ಲಿಂ ನಾಯಕನನ್ನು ಮಾಡಲು ತುದಿಗಾಲಲ್ಲಿ ನಿಂತಿರುವ ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಜಮೀರ್ಗೆ ಹೇಳಿ ಕಾಂಗೆ›ಸ್ ಪಕ್ಷದ ಘನತೆ ಉಳಿಸಲಿ. ಆನಂತರ ಕಾಂಗ್ರೆಸ್ ಮೀಟರ್ ರೈಸ್ ಮಾಡಲು ಜಮೀರ್ ನನ್ನು ಬಳಸಿಕೊಳ್ಳಲಿ. ನಾವೇನೂ ಬೇಡ ಅನ್ನುವುದಿಲ್ಲ ‘ ಎಂದೂ ರೇವಣ್ಣ ವ್ಯಂಗ್ಯವಾಡಿದರು.
ರೇವಣ್ಣ ಕ್ಷಮೆಯಾಚನೆಗೆ ಆಗ್ರಹ
ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಜೆಡಿಎಸ್ ನಾಯಕ ಎಚ್.ಡಿ ರೇವಣ್ಣ, ಕೂಡಲೇ ಮುಸ್ಲಿಂ ಸಮುದಾಯದಲ್ಲಿ ಬಹಿರಂಗ ಕ್ಷಮೆಯಾಚಿಸಬೇಕೆಂದು ಮುಸ್ಲಿಂ ಯೂನಿಟಿ ಸಂಘಟನೆಯ ರಾಜ್ಯ ಸಮಿತಿಯ ಮುಖಂಡ ಎ.ಜೆ.ಖಾನ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರೇವಣ್ಣ ಅವರು ಮುಸ್ಲಿಂ ರಾಜಕೀಯ ಮುಖಂಡರ ಬಗ್ಗೆ ಪದೇಪದೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇದು ಖಂಡನೀಯ. ಇಂತಹ ಹೇಳಿಕೆಗಳನ್ನು ಮತ್ತೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಸಂಘಟನೆ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದರು.