ಎಸ್ಡಿಪಿಐ ಜತೆ ಚುನಾವಣಾ ಮೈತ್ರಿ ಸ್ಪಷ್ಟಪಡಿಸಲಿ: ಶೋಭಾ ಆಗ್ರಹ
Team Udayavani, Jan 22, 2018, 9:41 AM IST
ಬೆಂಗಳೂರು: ದೇಶವಿರೋಧಿ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಪಿಎಫ್ಐನ ರಾಜಕೀಯ ಸಂಘಟನೆಯಾಗಿರುವ
ಎಸ್ಡಿಪಿಐ ಜತೆಗಿನ ಚುನಾವಣೆ ಮೈತ್ರಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇರಳದ ಕಣ್ಣೂರಿನಲ್ಲಿ ನಡೆದ ಎಬಿವಿಪಿ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ನಾಲ್ವರು ಎಸ್ ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್ಡಿಪಿಐ, ಪಿಎಫ್ಐನ ರಾಜಕೀಯ ಸಂಘಟನೆಯಾಗಿದ್ದು, ರಾಜ್ಯದಲ್ಲಿ ನಡೆದ ಕೆಲ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ
ಪಿಎಫ್ಐ ಶಾಮೀಲಾಗಿದೆ. ಪಿಎಫ್ಐ ಮತ್ತು ನಿಷೇಧಿತ ಸಿಮಿ ಉಗ್ರ ಸಂಘಟನೆಗಳಾಗಿದ್ದು, ದೇಶವಿರೋಧಿ ಸಂಘಟನೆಗಳ
ಜತೆಗೆ ಸಂಪರ್ಕ ಹೊಂದಿದೆ. ಆದ್ದರಿಂದ ಪಿಎಫ್ಐನ ರಾಜಕೀಯ ಸಂಘಟನೆಯಾಗಿರುವ ಎಸ್ಡಿಪಿಐ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಕುರಿತು ಕಾಂಗ್ರೆಸ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಯ ಕರ್ತ ಇಲ್ಯಾಸ್ ಪ್ರಕರಣ ಕೂಡ ಆಡಳಿತಾರೂಢ ಕಾಂಗ್ರೆಸ್ ಮತ್ತು ಸಮಾಜ ಘಾತಕ ಶಕ್ತಿಗಳ ನಡುವಿನ ಸಂಬಂಧ ಅನಾ ವರಣಗೊಳಿಸಿದೆ.
ಇಲ್ಯಾಸ್ ಪತ್ನಿಯೇ ಸಚಿವ ಯು.ಟಿ. ಖಾದರ್, ಇಲ್ಯಾಸ್ ನಡುವಿನ ನಿಕಟ ಸಂಪರ್ಕ ಖಚಿತಪಡಿಸಿದ್ದು, ಕಾಂಗ್ರೆಸ್ನ ಇಬ್ಬಂದಿತನಕ್ಕೆ ಉದಾಹರಣೆ. ಆದ್ದರಿಂದ ಎಸ್ಡಿಪಿಐ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಕುರಿತು ಕೆಪಿಸಿಸಿ ಅಧ್ಯಕ್ಷರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.