ಕರಾವಳಿ ಪ್ಯಾಕೇಜ್ ಪುನರ್ ಆರಂಭಿಸಲಿ: ಖಾದರ್ ಆಗ್ರಹ
Team Udayavani, Dec 17, 2021, 6:51 AM IST
ಬೆಳಗಾವಿ: ಕರಾವಳಿಯ ರೈತರಿಗೆ ಅನುಕೂಲವಾಗುವಂತೆ ಹಿಂದಿನ ಸರಕಾರದಲ್ಲಿ ಭತ್ತದ ಬೆಳೆಗೆ ಹೆಕ್ಟೇರ್ಗೆ 7,500 ರೂ. ಪ್ರೋತ್ಸಾಹಧನ ನೀಡುತ್ತಿದ್ದ ಕರಾವಳಿ ಪ್ಯಾಕೇಜ್ ಪುನರ್ ಆರಂಭಿಸಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.
ಅತಿವೃಷ್ಟಿ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಕರಾವಳಿಯ ಭತ್ತ, ಅಡಿಕೆ, ತೆಂಗು, ರಬ್ಬರ್ ಹಾಗೂ ಬಾಳೆ ಹಣ್ಣಿನ ಬೆಳೆ ಸಂಪೂರ್ಣ ನಾಶವಾಗಿದೆ. ಕರಾವಳಿಯ 14 ಶಾಸಕರು ರೈತರಿಗೆ ಆಗಿರುವ ನಷ್ಟದ ಬಗ್ಗೆ ಯಾವುದೇ ಪ್ರಸ್ತಾವ ಮಾಡಿಲ್ಲ. ಕರಾವಳಿಯ ಕೃಷಿಕರು ಬೆಳೆ ಹಾನಿಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಕಟಾವಿಗೆ ಬಂದಿದ್ದ ಭತ್ತ ಗದ್ದೆಯಲ್ಲೇ ಮೊಳಕೆಯೊಡೆದಿದೆ. ಎಡಿಆರ್ಎಫ್ ನಿಯಮದಡಿ ಭತ್ತಕ್ಕೆ ಗುಂಟೆಗೆ 6 ರೂ., ಅಡಿಗೆಗೆ 3 ರೂ., ಬಾಳೆಗೆ 20 ಪೈಸೆ ಹಾಗೂ ತೆಂಗಿಗೆ 90 ರೂ. ನೀಡಲಾಗುತ್ತಿದೆ. ಬೆಳೆ ಪರಿಹಾರ ಮೊತ್ತ ಹೆಚ್ಚಳದ ಜತೆಗೆ ಕರಾವಳಿ ಪ್ಯಾಕೇಜ್ ಪ್ರೋತ್ಸಾಹಧನ ಯೋಜನೆಯನ್ನು ಶೀಘ್ರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.