ಸಿಎಂ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ: ಶ್ರೀರಾಮುಲು
Team Udayavani, Jan 31, 2019, 12:30 AM IST
ಕೂಡ್ಲಿಗಿ: ಮುಖ್ಯಮಂತ್ರಿಗಳು ರಾಜೀನಾಮೆಗೂ ಸಿದ್ಧ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಮಾನ್ಯ ಜನರಿಗೂ ತಿಳಿಯುತ್ತದೆ. ಕುಮಾರಸ್ವಾಮಿಯವರೇ, ಪದೇ ಪದೇ ಇಂತಹ ಹೇಳಿಕೆ ಕೊಡುವ ಬದಲು ದಯಮಾಡಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಎಲೆಕ್ಷನ್ಗೆ ಯಾರು ಹೆಚ್ಚು ಕಲೆಕ್ಷನ್ ಮಾಡ್ತಾರೆ, ಕಮೀಷನ್ ಹೇಗೆ ಪಡೆಯಬೇಕು ಎನ್ನುವ ವಿಚಾರಕ್ಕೆ ಎರಡೂ ಪಕ್ಷಗಳಲ್ಲಿ ಪೈಪೋಟಿ ಶುರುವಾಗಿದೆ. ಈ ಕಾರಣಕ್ಕಾಗಿಯೇ ಸರಕಾರದ ಮಂತ್ರಿ, ಶಾಸಕರ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ. ಮೈತ್ರಿ ಸರಕಾರದಲ್ಲಿರುವವರೇ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿಗಳ ಕುಟುಂಬ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿದೆ. ಹೀಗಾಗಿ ಕಾಂಗ್ರೆಸ್ನವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶಕ್ಕೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡವು. ಆದರೆ, ವೈಯಕ್ತಿಕ ಹಿತ ಸಾಧನೆಗೆ ಎರಡೂ ಪಕ್ಷದವರು ಬಡಿದಾಡುತ್ತಿದ್ದಾರೆ. ಈ ಸರಕಾರ ಬಹಳ ದಿನ ಉಳಿಯೊಲ್ಲ ಎಂದರು.