ಸಾಂದರ್ಭಿಕ ಶಿಶು ಎಷ್ಟು ದಿನ ಬದುಕಿರುತ್ತೋ ನೋಡೋಣ
Team Udayavani, Jul 4, 2018, 6:00 AM IST
ವಿಧಾನಸಭೆ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ “ಇದು ಕುಸಿದುಹೋಗಲೆಂದೇ ನಿರ್ಮಾಣವಾದ ಆಡಳಿತ ಕುತಂತ್ರ ವ್ಯವಸ್ಥೆ’ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದನ್ನು ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿದ್ದ ಎಚ್.ಡಿ.ಕುಮಾರಸ್ವಾಮಿ ಮಾತನ್ನೇ ಪ್ರಸ್ತಾಪಿಸಿ, ಕೃತಕ ಮತ್ತು ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಜನಿಸಿದ ಸಾಂದರ್ಭಿಕ ಶಿಶು ಅದೆಷ್ಟು ದಿನ ಬದುಕಿರುತ್ತ ದೋ ನೋಡೋಣ ಎಂದು ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಂಗಳವಾರ ಮಾತನಾಡಿದ ಅವರು, ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಸರ್ಕಾರ ಇರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಜನರಿಂದ ತಿರಸ್ಕಾರಕ್ಕೊಳಗಾದ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಸೇರಿ ರಚಿಸಿದ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಅಂಬೇಡ್ಕರ್ ಅವರ ಆಶಯಗಳಿಗೆ ಅಣಕವಾಡುವ ರೀತಿ ಕಾಂಗ್ರೆಸ್, ಜೆಡಿಎಸ್ ಸೇರಿ ಸರ್ಕಾರ ರಚಿಸಿದೆ ಎಂದು ಆರೋಪಿಸಿದರು.
ಪ್ರತಿಪಕ್ಷವಾಗಿ ಕುಳಿತುಕೊಳ್ಳಲು ನಾವೇನೂ ಸಂಕೋಚಪಡುತ್ತಿಲ್ಲ. ಆದರೆ, ಇನ್ನೂ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ತರಾತುರಿಯಲ್ಲಿ ಮಾಜಿ ಪ್ರಧಾನಿಗೆ ಅಡ್ಡಬಿದ್ದು ಸರ್ಕಾರ ರಚಿಸಿದ್ದೇಕೆ? ಎಂದು ಪ್ರಶ್ನಿಸಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮಾಡಿದರೆ ಆಕಾಂಕ್ಷಿಗಳು ತಿರುಗಿ ಬೀಳುತ್ತಾರೇನೋ ಎಂಬ ಆತಂಕದಿಂದ ಯಾವುದೇ ಕಾರ್ಯಸೂಚಿ, ದಿಕ್ಸೂಚಿ ಇಲ್ಲದೆ ಈ ಸರ್ಕಾರ ಕೆಲಸ ಮಾಡುತ್ತಿದೆ. ತಮ್ಮ ಶಾಸಕರ ಮೇಲೆಯೇ ನಂಬಿಕೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬೇಷರತ್ ಬೆಂಬಲ ಎಂದು ಕಾಂಗ್ರೆಸ್ನರು ಹೇಳಿ ಈಗ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೇಳುತ್ತಿದ್ದರೆ, ಧರ್ಮಸ್ಥಳದ ಶಾಂತಿವನದಲ್ಲಿ ಕುಳಿತು ಸಿದ್ದರಾಮಯ್ಯ ಈ ಸರ್ಕಾರ ಲೋಕಸಭೆ ಚುನಾವಣೆವರೆಗೆ ಇರುತ್ತದೋ, ಇಲ್ಲವೋ ಎನ್ನುತ್ತಾರೆ. ಮುಖ್ಯಮಂತ್ರಿಗಳಂತೂ ನಾನು ಜನರ ಹಂಗಿನಲ್ಲಿಲ್ಲ, ಕಾಂಗ್ರೆಸ್ ಹಂಗಿನಲ್ಲಿದ್ದೇನೆ ಎಂದು ಹೇಳುತ್ತಾರೆ. ಆದರೆ, ಕೃತಕ ಮತ್ತು ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ, ಯಾರಧ್ದೋ ಮೇಲಿನ ದ್ವೇಷಕ್ಕೆ ಜನಿಸಿದ ಸಾಂದರ್ಭಿಕ ಶಿಶು ಎಷ್ಟು ದಿನ ಬದುಕಿರುತ್ತದೋ ನೋಡೋಣ ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ಹಿಂದಿನ ಸರ್ಕಾರದ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಎರಡು ಪಕ್ಷಗಳ ಮಧ್ಯೆ ಹೊಂದಾಣಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ತೋಟಗಾರಿಕಾ ಇಲಾಖೆ ಅಕ್ರಮ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನೇಮಕಾತಿ ಸ್ಥಗಿತ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮರಳು ಮಾಫಿಯಾ ನಿಯಂತ್ರಣ ಮುಂತಾದ ಯಾವ ಸಮಸ್ಯೆಗಳ ಬಗ್ಗೆಯೂ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ ಎಂದರು.
ಸರ್ಕಾರದ ಮಾನ ಹರಾಜು ಹಾಕುತ್ತೇವೆ
ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಅಧಿವೇಶನ ಮುಗಿದ ಬಳಿಕ ಜು. 12ರಿಂದ ಜನರ ಮಧ್ಯೆ ತೆರಳಿ ಸರ್ಕಾರದ ಮಾನ ಹರಾಜು ಹಾಕುತ್ತೇವೆಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ರೈತರ ಎಲ್ಲಾ
ಸಾಲ ಮನ್ನಾ, ಹಿರಿಯ ನಾಗರಿಕರಿಗೆ 6 ಸಾವಿರ ರೂ. ಪಿಂಚಣಿ, ಗರ್ಭಿಣಿಯರಿಗೆ ಪ್ರಸವ ಪೂರ್ವ ಮತ್ತು ನಂತರದಲ್ಲಿ ಒಟ್ಟು ಆರು ತಿಂಗಳು 6 ಸಾವಿರ ರೂ. ನೆರವು, ಬಡ ಹೆಣ್ಣುಮಕ್ಕಳಿಗೆ 2000 ರೂ. ಗೌರವಧನ… ಹೀಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಬಜೆಟ್ನಲ್ಲಿ ಈಡೇರಿಸದಿದ್ದಲ್ಲಿ ಬಿಜೆಪಿಯ ಎಲ್ಲಾ ಶಾಸಕರು ಇವರು ಹೇಳಿದ್ದೇನು, ಮಾಡಿದ್ದೇನು? ಎಂದು ಜನರಿಗೆ ವಿವರಿಸುತ್ತಾ ಸರ್ಕಾರದ ಮಾನ ಹರಾಜು ಹಾಕಲಿದ್ದಾರೆಂದು
ಹೇಳಿದರು. ಮಧ್ಯಪ್ರವೇಶಿಸಿದ ಸ್ಪೀಕರ್, (ಸರ್ಕಾರ) ಮಾತು ಉಳಿಸಿಕೊಂಡರೆ ನಿಮಗೇನು ಉಳಿಯುತ್ತದೆ ಎಂದು ಪ್ರಶ್ನಿಸಿದಾಗ, ಮಾತು ಉಳಿಸಿಕೊಳ್ಳದಿದ್ದರೆ ಮಾನ ಹರಾಜು ಹಾಕುತ್ತೇವೆ. ಉಳಿಸಿಕೊಂಡರೆ ಕುಮಾರಸ್ವಾಮಿ ಅವರಿಗೆ ಜೈಕಾರ ಹಾಕುತ್ತೇವೆ ಎಂದರು.
ಮರಳು ಮಾಫಿಯಾ ವಾಗ್ವಾದ
ವಿಧಾನಸಭೆ: ರಾಜ್ಯದಲ್ಲಿ ಮರಳು ದಂಧೆ ಮತ್ತು ಮರಳು ಮಾಫಿಯಾಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತಲ್ಲದೆ, ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದ ಪ್ರಸಂಗವೂ ನಡೆಯಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ, ರಾಜ್ಯದಲ್ಲಿ ಮರಳು ಮಾμಯಾದಲ್ಲಿ ಸರ್ಕಾರವೇ ಶಾಮೀಲಾಗಿದೆ. ಪೊಲೀಸರು ಕೇಳಿದಷ್ಟು ಹಣ ಕೊಟ್ಟು ದಂಧೆ ನಡೆಸಲಾಗುತ್ತಿದೆ. ಒಂದು ಲೋಡ್ ಮರಳಿಗೆ 15-20 ಸಾವಿರ ರೂ. ಲಂಚ ಪೊಲೀಸರು ಮತ್ತು ತಹಸೀಲ್ದಾರ್ಗಳಿಗೆ ನೀಡಿ ಮರಳು ಸಾಗಿಸಲಾಗುತ್ತಿದೆ. ಭೀಮಾತೀರದಲ್ಲಿ ಹಿರಿಯ
ಪೊಲೀಸ್ ಅಧಿಕಾರಿಯೇ ಇದರಲ್ಲಿ ಶಾಮೀಲಾಗಿದ್ದು, ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಅಧಿಕಾರಿಯ ಹೆಸರು ಕಳುಹಿಸಿಕೊಡುತ್ತೇನೆ ಎಂದು ಹೇಳಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಮುಖ್ಯಮಂತ್ರಿಗಳು ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಮರಳು ದಂಧೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಈಗ ಮುಖ್ಯಮಂತ್ರಿಯಾಗಿ ಮರಳು ದಂಧೆ ನಿಯಂತ್ರಣ ಕುರಿತಂತೆ ಅಭಿಪ್ರಾಯ ಹೇಳಬೇಕು. ಈ ಬಗ್ಗೆ ತನಿಖೆಗೆ ಆದೇಶಿಸುತ್ತಾರೆಯೇ ಎಂದು ಪ್ರಶ್ನಿಸಿದರು. ಕೆ.ಎಸ್. ಈಶ್ವರಪ್ಪ, ಸಿ.ಸಿ.ಪಾಟೀಲ್, ಗೂಳಿಹಟ್ಟಿ ಶೇಖರ್ ಮತ್ತಿತರರೂ ಮರಳು ದಂಧೆ ಬಗ್ಗೆ
ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮರಳು ನೀತಿ ಎಂಬ ಹೊಸ ನೀತಿ ಜಾರಿಗೆ ತರಲು ತೀರ್ಮಾನಿಸಿದ್ದು ಯಾರು ಎಂಬುದು ಚರ್ಚೆಯಾಗಲಿ. ದಂಧೆ ಆರಂಭವಾಗಿರುವುದು ಯಾವಾಗ ಎಂದು ಪ್ರಶ್ನಿಸಿ ಹಿಂದಿನ ಬಿಜೆಪಿ ಸರ್ಕಾರದ ಬಗ್ಗೆ ಕಿಡಿ ಕಾರಿದರಲ್ಲದೆ, ಒಬ್ಬನೇ ವ್ಯವಸ್ಥೆ ಸರಿಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ ಸೇರಿ ಬಿಜೆಪಿ ಸದಸ್ಯರು, ಮುಖ್ಯಮಂತ್ರಿಯವರೇ ಅಸಹಾಯಕತೆ ವ್ಯಕ್ತಪಡಿಸುವುದು ಸರಿಯಲ್ಲ ಎಂದಾಗ, ಯಾವ್ಯಾವ ಸಂದರ್ಭದಲ್ಲಿ ಏನೇನಾಗಿದೆ ಎಂಬುದನ್ನು ಎಲ್ಲರೂ ಆತ್ಮಮುಟ್ಟಿ ನೋಡಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರಲ್ಲದೆ, ಸ್ವಲ್ಪ ಸಮಯ ಕೊಡಿ. ನಾನು ಪಲಾಯನವಾದ ಮಾಡುವುದಿಲ್ಲ. ಇಲ್ಲೇ ಇರುತ್ತೇನೆ ಎಂದರು.
ನಂತರ ಮಾತನಾಡಿದ ಯಡಿಯೂರಪ್ಪ, ಮರಳು ಮಾಫಿಯಾಕ್ಕೆ ನಿಯಂತ್ರಣ ಹೇರಲು ಮುಖ್ಯಮಂತ್ರಿಗಳು ಮುಂದಾದರೆ ಬಿಜೆಪಿ ಅವರ ಜತೆ ನಿಂತು ಸಂಪೂರ್ಣ ಬೆಂಬಲ ನೀಡುತ್ತದೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ