ರೇಷ್ಮೆ ಬೆಳಗಾರರಿಗೆ ಪ್ರೋತ್ಸಾಹ ಧನ ನೀಡಲು ಸಿಎಂಗೆ ಪತ್ರ
Team Udayavani, Jul 9, 2020, 7:00 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸಂಕಷ್ಟದಿಂದ ರೇಷ್ಮೆ ದರ ಕುಸಿತವಾಗಿದ್ದು ರಾಜ್ಯ ಸರ್ಕಾರ ತಕ್ಷಣ ಪ್ರೋತ್ಸಾಹ ಧನ ನೀಡಲು ರಕ್ಷಣಾತ್ಮಕ ದರ ನೀಡುವಂತೆ ಸಂಸದ ಡಿ.ಕೆ.ಸುರೇಶ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕೋವಿಡ್ 19 ವೈರಸ್ ಹಾವಳಿ ಹೆಚ್ಚಾಗಿದ್ದರಿಂದ ರೇಷ್ಮೆ ದರ ಪ್ರತಿ ಕೆ.ಜಿ. ಮಿಶ್ರತಳಿ ಗೂಡಿಗೆ 170 ಹಾಗೂ ದ್ವಿತಳಿ ಗೂಡಿಗೆ 220 ಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ.
ರೇಷ್ಮೆ ದರ ಕುಸಿತದಿಂದ ರೇಷ್ಮೆ ಬೆಳೆಯನ್ನೇ ನಂಬಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಷ್ಮೆ ಬೆಲೆ ಕುಸಿತಗೊಂಡಾಗ ಪ್ರೋತ್ಸಾಹ ಧನವಾಗಿ ರಾಜ್ಯ ಸರ್ಕಾರ ರಕ್ಷಣಾತ್ಮಕ ದರ ನೀಡುವ ಬಗ್ಗೆ ಹಿಂದಿನ ಸರ್ಕಾರದಲ್ಲಿ ಡಾ. ಬಸವರಾಜ್ ಅವರ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿದ್ದು, ಆ ಸಮಿತಿ ವರದಿ ಆಧಾರದಲ್ಲಿ ಮಿಶ್ರ ತಳಿ ರೇಷ್ಮೆಗೆ ಪ್ರತಿ ಕೆ.ಜಿ ಗೆ 30.ರೂ. ಹಾಗೂ ದ್ವಿತಳಿ ಗೂಡಿಗೆ 50 ರೂ. ಪ್ರೋತ್ಸಾಹದಾಯಕವಾಗಿ ರಕ್ಷಣಾತ್ಮಕ ದರ ನೀಡುವಂತೆ ಶಿಫಾರಸು ಮಾಡಿದ್ದಾರೆ.
ತಜ್ಞರ ಸಮಿತಿ ವರದಿ ಆಧಾರದಲ್ಲಿ ರಾಜ್ಯ ಸರ್ಕಾರ ಈಗ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರಿಗೆ ರಕ್ಷಣಾತ್ಮಕ ದರ ನೀಡಿ ಪ್ರೋತ್ಸಾಹ ನೀಡುವಂತೆ ಡಿ.ಕೆ.ಸುರೇಶ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.